ಬೆಂಗಳೂರು: ಸರಿಯಾಗಿ ಆಡಳಿತ ನಡೆಸದ ಸುಮಾರು 850 ಅಧಿಕಾರಿಗಳ ವಿರುದ್ಧ ಕೇಸುಗಳು ದಾಖಲಾಗಿದ್ದರೂ, ಮೇಲ್ನೋಟಕ್ಕೆ ಅಧಿಕಾರಿಗಳ ಕೆಟ್ಟ ಆಡಳಿತ ಎಂದು ಲೋಕಾಯುಕ್ತ ಅನಿಸಿದರೂ ಯಾವುದೇ ಇಲಾಖೆಗಳಿಂದ ಇದುವರೆಗೆ ತನಿಖೆ ಆರಂಭಿಸಿಲ್ಲ. ಸರ್ಕಾರದ ಒಪ್ಪಿಗೆ ಇನ್ನೂ ಸಿಕ್ಕಿಲ್ಲ.
ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ಇಬ್ಬರು ಉಪ ಲೋಕಾಯುಕ್ತ ನ್ಯಾಯಮೂರ್ತಿಗಳಾದ ಸುಭಾಷ್ ಬಿ ಆದಿ ಮತ್ತು ಎನ್. ಆನಂದ ಅವರು ನಡೆಸಿದ ಪ್ರಾಥಮಿಕ ತನಿಖೆ ನಂತರ ಕರ್ನಾಟಕ ಲೋಕಾಯುಕ್ತ ಕಾಯ್ದೆ ಸೆಕ್ಷನ್ 12(3)ರಡಿಯಲ್ಲಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಆದರೆ ಸರ್ಕಾರ ತಕ್ಷಣವೇ ಇಲಾಖಾ ತನಿಖೆಗೆ ಆದೇಶ ನೀಡದ ಕಾರಣ ಕೇಸಿಗೆ ಸಂಬಂಧಪಟ್ಟಂತೆ ಯಾವುದೇ ಬೆಳವಣಿಗೆಗಳಾಗಿಲ್ಲ.
ಇನ್ನು ಕೆಲವು ಕೇಸುಗಳಲ್ಲಿ ಎರಡು ವರ್ಷಗಳ ಹಿಂದೆಯೇ ಕೇಸುಗಳನ್ನು ಸಲ್ಲಿಸಿದ್ದರೂ ಕೂಡ ಸರ್ಕಾರ ಸುಮ್ಮನೆ ಕೈಕಟ್ಟಿ ಕುಳಿತಿದೆ. ಜನವರಿ 29ರಂದು ಹೊಸ ಲೋಕಾಯುಕ್ತರಾಗಿ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ನೇಮಕಗೊಂಡ ನಂತರ ಕೆಲವು ವರದಿಗಳನ್ನು ಸರ್ಕಾರಕ್ಕೆ ಸಲ್ಲಿಸಿದ್ದರು.
ಉಪ ಲೋಕಾಯುಕ್ತ ನ್ಯಾಯಮೂರ್ತಿ ಸುಭಾಷ್ ಬಿ ಆದಿ ತಮ್ಮ ವ್ಯಾಪ್ತಿಗೆ ಬರುವ ಸುಮಾರು 7,000 ಕೇಸುಗಳಲ್ಲಿ 3,150 ಕೇಸುಗಳನ್ನು ವಿಲೇವಾರಿ ಮಾಡಿದ್ದಾರೆ. ನ್ಯಾಯಮೂರ್ತಿ ಎನ್. ಆನಂದ ತಮ್ಮ ವ್ಯಾಪ್ತಿಗೆ ಬಂದ 5,000 ಕೇಸುಗಳಲ್ಲಿ 1,121 ಕೇಸುಗಳನ್ನು ವಿಲೇವಾರಿ ಮಾಡಿದ್ದಾರೆ.
ವಿಲೇವಾರಿಯಾದ ಕೇಸುಗಳಲ್ಲಿ 850 ಕೇಸುಗಳಿಗೆ ಸಂಬಂಧಪಟ್ಟಂತೆ ಸರ್ಕಾರಕ್ಕೆ ವರದಿ ನೀಡಿದ್ದು ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸುವಂತೆ ಸರ್ಕಾರದಿಂದ ಒಪ್ಪಿಗೆ ಕೇಳಲಾಗಿದೆ.