ಬೆಂಗಳೂರು: ತಿಪ್ಪಗೊಂಡನ ಹಳ್ಳಿಯ ಚಾಮರಾಜ ಸಾಗರ ಜಲಾಶಯ ಪುನಶ್ಚೇತನಕ್ಕೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಜಲಮಂಡಳಿಗೆ 10 ಕೋಟಿ ರುಪಾಯಿಯನ್ನು ಬಿಡುಗಡೆ ಮಾಡಿದೆ.
ಬೆಂಗಳೂರಿನಿಂದ 35 ಕಿ.ಮೀ ದೂರದ ಮಾಗಡಿ ರಸ್ತೆ ಬಳಿ ಇರುವ ತಿಪ್ಪಗೊಂಡನಹಳ್ಳಿ ಜಲಾಶಯ 1933ರಲ್ಲಿ ಪ್ರಾರಂಭವಾಗಿದ್ದು ಅಲ್ಲಿಂದ 2012ರವರೆಗೆ ಬೆಂಗಳೂರು ಜನತೆಗೆ ಕುಡಿಯುವ ನೀರು ಪೂರೈಸುತ್ತಿತ್ತು. 2012ರ ಬಳಿಕ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದರಿಂದ ನೀರಿನ ಸರಬರಾಜು ನಿಂತುಹೋಗಿತ್ತು. ಇದೀಗ ಈ ಜಲಾಶಯವನ್ನು ಇಸ್ರೇಲ್ ಮೂಲದ ಸಂಸ್ಥೆ ಪುನಶ್ಚೇತನಗೊಳಿಸಲಿದೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇತ್ತೀಚೆಗಷ್ಟೇ ಹೆಸರುಘಟ್ಟ ಲೇಕ್ ಮೇಲೆ ಅರಿಯುವ ಅರ್ಕಾವತಿ ಮತ್ತು ತಿಪ್ಪಗೊಂಡನಹಳ್ಳಿ ಜಲಾಶಯವನ್ನು ಪುನಶ್ಚೇತನಗೊಳಿಸಲು ಟೆಂಡರ್ ಕರೆದಿದ್ದು, ಇದೀಗ ಇಸ್ರೇಲ್ ಮೂಲದ ಸಂಸ್ಥೆಯೊಂದು ಪುನಶ್ಚೇತನ ಟೆಂಡರ್ ಅನ್ನು ಪಡೆದಿದ್ದು ಕಾರ್ಯ ಆರಂಭಿಸಲಿದೆ.
ತಿಪ್ಪಗೊಂಡನಹಳ್ಳಿ ಜಲಾಶಯ 1998ರಲ್ಲಿ ಕೊನೆಯ ಬಾರಿಗೆ ತುಂಬಿತ್ತು. 2004ರಲ್ಲಿ 72 ಅಡಿ ನೀರಿತ್ತು. ಆ ಬಳಿಕ ನೀರಿನ ಪ್ರಮಾಣ ಕಡಿಮೆಯಾಗುತ್ತಲೇ ಬಂತು. ಇದರಿಂದಾಗಿ ನೀರು ಸರಬರಾಜು ನಿಲ್ಲಿಸಲಾಗಿತ್ತು. ಇದೀಗ ಜಲಾಶಯದಲ್ಲಿನ ನೀರು ರಾಸಾಯನಿಕ ಮಿಶ್ರಿತವಾಗಿದೆ. ನೈಟ್ರೇಟ್ ಸೇರಿದಂತೆ ನೀರಿನಲ್ಲಿ ಕರಗಿದ ಘನವಸ್ತುಗಳ(ಟಿಡಿಎಸ್) ಪ್ರಮಾಣ ಜಲಾಶಯದಲ್ಲಿ ಶೇಖಡ 800ರಷ್ಟಿದೆ.