ಬೆಂಗಳೂರು: ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯ ಸರ್ಕಾರ 1ನೇ ತರಗತಿಯಿಂದ ಎಲ್ಲಾ ಶಾಲೆಗಳಲ್ಲೂ ಕ್ರೀಡಾ ಶಿಕ್ಷಣವನ್ನು ಕಡ್ಡಾಯಗೊಳಿಸಲು ನಿರ್ಧರಿಸಿದೆ, ಆದರೆ ರಾಜ್ಯದ ಸುಮಾರು 30 ಸಾವಿರ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಇನ್ನೂ ಆಟದ ಮೈದಾನಗಳಿಲ್ಲ.
ಸದ್ಯ ನಡೆಯುತ್ತಿರುವ ವಿಧಾನಸಭೆ ಅಧಿವೇಶನದಲ್ಲಿ ಬಿಜೆಪಿ ಮುಖಂಡ ಹಾಗೂ ವಿಧಾನ ಪರಿಶತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಪ್ರಶ್ನೆಗೆ ಉತ್ತರಿಸಿದ ಉನ್ನತ ಪ್ರಾಥಮಿಕ ಶಿಕ್ಷಣ ಸಚಿವ ತನ್ವೀರ್ ಸೇಠ್ ರಾಜ್ಯದ ಶಾಲೆಗಳಲ್ಲಿರುವ ಆಟದ ಮೈದಾನದ ಬಗ್ಗೆ ಮಾಹಿತಿ ನೀಡಿದ್ದಾರೆ. ಕರ್ನಾಟಕದ 29,152 ಶಾಲೆಗಳಲ್ಲಿ ಆಟದ ಮೈದಾನಗಳಿಲ್ಲ ಎಂದು ವಿವರ ನೀಡಿದ್ದಾರೆ,
10,310 ಕಿರಿಯ ಪ್ರಾಥಮಿಕ ಶಾಲೆ, 14,848 ಪ್ರೌಢ ಶಾಲೆ, ಹಾಗೂ 3879 ಹೈಯ್ಯರ್ ಫ್ರೈಮರಿ ಶಾಲೆಗಳಲ್ಲಿ ಆಟದ ಮೈದಾನಗಳಿಲ್ಲ ಎಂಗು ಅಂಕಿ ಅಂಶ ನೀಡಿದ್ದಾರೆ,
ಸರಿಸುಮಾರು 30 ಸಾವಿರ ಶಾಲೆಗಳಲ್ಲಿ ಆಟದ ಮೈದಾನವಿಲ್ಲ. ಹೀಗಿರುವಾಗ ಸರ್ಕಾರ ಹೇಗೆ 1ನೇ ತರಗತಿಯಿಂದ ಕ್ರೀಡಾ ಶಿಕ್ಷಣ ಆರಂಭಿಸುತ್ತದೆ ಎಂದು ಪ್ರಶ್ನಿಸಿರುವ ಗಣೇಶ್ ಕಾರ್ಣಿಕ್ ಸಮಾಧಾನಕರವಾದ ಉತ್ತರ ನೀಡಬೇಕೆಂದು ಆಗ್ರಹಿಸಿದರು.
ಶಾಲೆಗಳಲ್ಲಿ ಮಕ್ಕಳಿಗೆ ಆಟದ ಮೈದಾನದ ಕೊರೆತೆಯಿಂದಾಗಿ ಮಕ್ಕಳ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಮಕ್ಕಳ ಹಕ್ಕುಗಳ ಟ್ರಸ್ಟ್ ನ ಕಾರ್ಯಕಾರಿ ನಿರ್ದೇಶಕ ವಸುದೇವ ಶರ್ಮಾ ಹೇಳಿದ್ದಾರೆ. ಶಾಲೆಗಳನ್ನು ಆರಂಭಿಸುವಾಗ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಟ್ರಸ್ಟ್ ಗಳು ಹಾಗೂ ಸಂಸ್ಥೆಗಳು ಆಟದ ಮೈದಾನದ ಬಗ್ಗೆ ಸುಳ್ಳು ಮಾಹಿತಿ ನೀಡುತ್ತವೆ ಎಂದು ಹೇಳಿದ್ದಾರೆ.
2009 ರಲ್ಲಿ ಶಿಕ್ಷಣ ಹಕ್ಕು ಕಾಯಿದೆ ಜಾರಿಗೆ ಬಂದ ನಂತರ, ಶಾಲೆಗಳಲ್ಲಿ ಆಟದ ಮೈದಾನ, ಪ್ರಯೋಗಾಲಯ ಮತ್ತು ಗ್ರಂಥಾಲಯ ಸೌಲಭ್ಯಗಳು ಇರಬೇಕೆಂದು ಕಡ್ಡಾಯ ಮಾಡಲಾಯಿತು. 2010-11 ರಿಂದ ಇಂದಿನವರೆಗೂ ಆಟದ ಮೈದಾನವಿಲ್ಲದೇ ಶಾಲೆಗಳು ನಡೆಯುತ್ತಿವೆ ಎಂದು ಅವರು ತಿಳಿಸಿದ್ದಾರೆ.
ಆಟದ ಮೈದಾನದ ಜೊತೆಗೆ ರಾಜ್ಯದ ಶಾಲೆಗಳಲ್ಲೂ ದೈಹಿಕ ಶಿಕ್ಷಕರ ಕೊರತೆಯೂ ಅಪಾರವಾಗಿದೆ. ಸದ್ಯ1,233 ದೈಹಿಕ ಶಿಕ್ಷಕರ ನೇಮಕಾತಿಗೆ ಆದೇಶ ನೀಡಲಾಗಿದೆ, ಇನ್ನೂ 1,426 ದೈಹಿಕ ಶಿಕ್ಷಕರ ಹುದ್ದೆಗಳು ಖಾಲಿಯಿವೆ. ಎಂದು ತಿಳಿದು ಬಂದಿದೆ.
Advertisement