ಮೈಸೂರು: ನಂಜನಗೂಡು, ಗುಂಡ್ಲುಪೇಟೆಯಲ್ಲಿ ಉಪ ಚುನಾವಣೆ ಪ್ರಚಾರದ ಭರಾಟೆ ಮುಂದುವರಿದಿದೆ, ಚುನಾವಣಾ ಕಾವಿನ ಜೊತೆಗೆ ಬಿಸಿಲಿನ ಆರ್ಭಟವೂ ಹೆಚ್ಚಾಗಿದೆ.
ಪ್ರಚಾರದಲ್ಲಿ ತೊಡಗಿರುವ ಪಕ್ಷದ ಮುಖಂಡರು ಬೆವರು ಹಾಗೂ ನಿರ್ಜಲೀಕರಣ ಸಮಸ್ಯೆಯಿಂದ ಮುಕ್ತಿ ಪಡೆಯಲು ಮಜ್ಜಿಗೆ ಮೊರೆ ಹೋಗಿದ್ದಾರೆ ಪ್ರಚಾರದ ವೇಳೆ ತಮ್ಮ ಬಾಯಾರಿಕೆ ಹಿಂಗಿಸಿಕೊಳ್ಳಲು ನಂದಿನಿ ಮಸಾಲಾ ಮಜ್ಜಿಗೆಯನ್ನು ಯಥೇಚ್ಚವಾಗಿ ಬಳಸುತ್ತಿದ್ದಾರೆ.
ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಡಜನ್ ಗಟ್ಟಲೇ ಮಜ್ಜಿಗೆ ಹಾಗೂ ಕೋಲ್ಡ್ ವಾಟರ್ ಬಾಟಲ್ ಗಳನ್ನು ಉಪಯೋಗಿಸುತ್ತಿದ್ದಾರೆ. ಇದರಿಂದ ಮಜ್ಜಿಗೆ ಮಾರಾಟದಲ್ಲಿ ಏರಿಕೆಯಾಗಿದೆ.
ದಿನವೊಂದಕ್ಕೆ ಸುಮಾರು 200 ಲೀಟರ್ ಮಾರಾಟವಾಗುತ್ತಿದ್ದ ಮಜ್ಜಿಗೆ ಕಳೆದ ಒಂದು ವಾರದಿಂದ 300 ಲೀಟರ್ ಗೆ ಏರಿಕೆಯಾಗಿದೆ. ಏಪ್ರಿಲ್ 7 ರವರೆಗೂ ಚುನಾವಣಾ ಪ್ರಚಾರ ನಡೆಯಲಿದ್ದು, ಅಲ್ಲಿಯವರೆಗೂ ಮಜ್ಜಿಗೆ ಮಾರಾಟ ಪ್ರಮಾಣದಲ್ಲಿ ಏರಿಕೆಯಾಗಲಿದೆ ಎಂದು ಮಾರಾಟಾಗರರು ತಿಳಿಸಿದ್ದಾರೆ.
ಉಪ ಚುನಾವಣೆಯಿಂದ ಮಜ್ಜಿಗೆ ಬೇಡಿಕೆ ಹೆಚ್ಚಾಗಿದ್ದು, ಅಗತ್ಯವಿರುವ ಪ್ರಮಾಣದ ಮಜ್ಜಿಗೆ ಪೂರೈಸಲು ಮೈಮೂಲ್ ಸಿದ್ದವಿದೆ ಎಂದು ಮೈಮೂಲ್ ಮಾರಾಟ ವಿಭಾಗದ ಅಧಿಕಾರಿ ನಾಗರಾಜೇಗೌಡ ಹೇಳಿದ್ದಾರೆ.
Advertisement