ಸಿಎಂಗಾಗಿ ಗಂಟೆಗಟ್ಟಲೆ ಕಾದ ಮಾಜಿ ಸೈನಿಕರು: ಸಿದ್ದು ಸರ್ಕಾರದಿಂದ ಯೋಧರಿಗೆ ಅಪಮಾನ?

ಯುದ್ಧ ಸ್ಮಾರಕ ಸಮಾರಂಭವೊಂದರಲ್ಲಿ ಮಾಜಿ ಸೈನಿಕರನ್ನು ಆಹ್ವಾನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅವರಿಗೆ ಅಪಮಾನ ಮಾಡಿದ್ದಾರೆಂಬ ಮಾತುಗಳು ಕೇಳಿಬರತೊಡಗಿವೆ...
ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು: ಯುದ್ಧ ಸ್ಮಾರಕ ಸಮಾರಂಭವೊಂದರಲ್ಲಿ ಮಾಜಿ ಸೈನಿಕರನ್ನು ಆಹ್ವಾನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅವರಿಗೆ ಅಪಮಾನ ಮಾಡಿದ್ದಾರೆಂಬ ಮಾತುಗಳು ಕೇಳಿಬರತೊಡಗಿವೆ. 
ಬ್ರಿಗೇಡ್ ರಸ್ತೆಯಲ್ಲಿ ನಡೆಸಲಾಗಿದ್ದ ಯುದ್ಧ ಸ್ಮಾರಕ ಉದ್ಘಾಟನಾ ಸಮಾರಂಭದಲ್ಲಿ ಮಾಜಿ ಸೈನಿಕರನ್ನು ಆಹ್ವಾನಿಸಲಾಗಿತ್ತು. ಸಮಾರಂಭದಲ್ಲಿ ಸೈನಿಕರನ್ನು ಗೌರವದಿಂದ ನಡೆಸಿಕೊಳ್ಳಲಿಲ್ಲವೆಂದು ನಿವೃತ್ತ ಸೇನಾಧಿಕಾರಿಗಳು ಮತ್ತು ಯೋಧರು ಅಸಮಾಧಾನವನ್ನು ಹೊರಹಾಕಿದ್ದಾರೆ. 
ಸ್ಥಳಕ್ಕೆ ಬೆಳಿಗ್ಗೆ 10.30 ಗಂಟೆಗೆ ಬರಬೇಕಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 11.45-12 ಗಂಟೆ ಸುಮಾರಿಗೆ ಆಗಮಿಸಿದ್ದಾರೆ. ಯುದ್ಧ ಸ್ಮಾರಕಕ್ಕೆ ಪುಷ್ಪಗುಚ್ಛವಿರಿಸಿ ವೇದಿಕೆ ಏರಿದರು. ಕಾರ್ಯಕ್ರಮಕ್ಕಾಗಿ ಸೇನಾ ಸಮವಸ್ತ್ರ, ಪದಕ ಧರಿಸಿ ಬಂದಿದ್ದ ನಿವೃತ್ತ ಸೈನಿಕರು ಮುಖ್ಯಮಂತ್ರಿಗಳ ಭೇಟಿಗಾಗಿ ಬಿಸಿಲಿನಲ್ಲಿಯೇ ನಿಂದು ಗಂಟೆಗಟ್ಟಲೆ ಕಾದರು. 
ಸಾಕಷ್ಟು ಯೋಧರು ಬಹಳ ದೂರದಿಂದ ಕಾರ್ಯಕ್ರಮಕ್ಕೆ ಬಂದಿದ್ದರು. ಸಮಯಕ್ಕೆ ಸರಿಯಾಗಿ ಕಾರ್ಯಕ್ರಮಕ್ಕೆ ಬಂದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ಸರಿಯಾದ ಸಮಯಕ್ಕೆ ಕಾರ್ಯಕ್ರಮಕ್ಕೆ ಬಂದಿರಲಿಲ್ಲ. ಕಾರ್ಯಕ್ರಮ ಹುತಾತ್ಮ ಯೋಧರಿಗಾಗಿ ಆದ್ದರಿಂದ ಇದು ನಮಗೆ ಬಹಳ ಪವಿತ್ರವಾದ ಕಾರ್ಯಕ್ರವಾಗಿರುತ್ತದೆ. ಯುದ್ಧ ಸಂದರ್ಭದಲ್ಲಿ ಗಾಯಗೊಂಡಿದ್ದ ಹವಾಲ್ದಾರ್ ಗುಮ್ಕರ್ ಅವರೂ ಕೂಡಾ ಕಾರ್ಯಕ್ರಮಕ್ಕೆ ಬಂದಿದ್ದರು. ಹುಟ್ಟೂರಲ್ಲಿಯೇ ಇದ್ದರೂ ಕಾರ್ಯಕ್ರಮಕ್ಕೆ ಆಗಮಿಸುವ ಸಲುವಾಗಿ ಹಿಂದಿನ ರಾತ್ರಿಯೇ ನಗರಕ್ಕೆ ಬಂದಿದ್ದರು. ಕಾರ್ಯಕ್ರಮದ ಸಮಯ ಕೇಳಿ ಬೆಳಿಗ್ಗೆ 10.30ಕ್ಕೆ ಆಗಮಿಸಿದ್ದರು. ಮಾಜಿ ಸೈನಿಕರೆಲ್ಲರೂ ಅದೇ ಸಮಯಕ್ಕೆ ಕಾರ್ಯಕ್ರಮಕ್ಕೆ ಬಂದಿದ್ದೆವು ಎಂದು ಮಾಜಿ ಕರ್ನಲ್ ಕೆ.ಡಿ. ಶೆಲ್ಲಿ ಹೇಳಿದ್ದಾರೆ. 
ಕಾರ್ಯಕ್ರಮಕ್ಕೆ ಸರಿಯಾದ ಸಮಯಕ್ಕೆ ಬಂದರೂ ಮುಖ್ಯಮಂತ್ರಿಗಳು ಮಾತ್ರ ಕಾರ್ಯಕ್ರಮಕ್ಕೆ ಆಗಮಿಸಿರಲಿಲ್ಲ. ಕೆಲ ಸ್ಥಳೀಯ ನಾಯಕರು ವೇದಿಕೆಯಲ್ಲಿ ಕನ್ನಡದಲ್ಲಿ ಮಾತನಾಡುತ್ತಿದ್ದರು. ಕಾರ್ಯಕ್ರಮದ ಉದ್ದೇಶವನ್ನು ಮರೆತು ಸರ್ಕಾರದ ಯೋಜನೆಗಳು, ಕಾರ್ಯಚಟುವಟಿಕೆಗಳ ಬಗ್ಗೆ ಮಾತನಾಡುತ್ತಿದ್ದರು. ಯುದ್ಧ ಸ್ಮಾರಕದ ಬಗ್ಗೆಯಾಗಲೀ, ಹುತಾತ್ಮ ಯೋಧರ ಬಗ್ಗೆಯಾಗಲೀ ಏನನ್ನೂ ಮಾತನಾಡಲಿಲ್ಲ. 
ಮುಖ್ಯಮಂತ್ರಿಗಳಿಗೆ ಯಾವ ಸಮಯಕ್ಕೆ ಕಾರ್ಯಕ್ರಮಕ್ಕೆ ಬರಬೇಕೆಂದು ಹೇಳಿದ್ದರೋ ನನಗೆ ಗೊತ್ತಿಲ್ಲ. ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಅವರು 11.45-12 ಸುಮಾರಿಗೆ ಗಂಟೆ ತಮ್ಮ ಬೆಂಗಾವಲು ಪಡೆ ಹಾಗೂ ಸ್ಥಳೀಯ ನಾಯಕರೊಂದಿಗೆ ಬಂದರು. ಸ್ಥಳೀಯ ನಾಯಕರೊಬ್ಬರು ಕನ್ನಡದಲ್ಲಿ ಸರ್ಕಾರದ ಯೋಜನೆಗಳ ಬಗ್ಗೆ ಮಾತನಾಡುವಾಗ ಗುಮ್ಕರ್ ಅವರು ಆಶ್ಚರ್ಯದಿಂದ ನೋಡುತ್ತಿದ್ದರು. ಮುಖ್ಯಮಂತ್ರಿಗಳು ಸೌಜನ್ಯಕ್ಕೂ ನಮ್ಮತ್ತ ತಿರುಗಿ ನೋಡಲಿಲ್ಲ. ಯುದ್ಧ ಸ್ಮಾರಕ ಅಭಿವೃದ್ಧಿಪಡಿಸಿದ ಸರ್ಕಾರವನ್ನು ಅಭಿನಂದಿಸಲು ಬಂದಿದ್ದೆವು ಎಂದು ಶೆಲ್ಲಿ ತಿಳಿಸಿದ್ದಾರೆ
ಕಾರ್ಯಕ್ರಮದಲ್ಲಿ ಇಷ್ಟೆಲ್ಲಾ ಆಗುತ್ತಿದ್ದರೂ ಮುಖ್ಯಮಂತ್ರಿಗಳಿಗೆ ಮಾತ್ರ ಇದಾವುದೂ ಗಮನಕ್ಕೇ ಬಂದಿರಲಿಲ್ಲ. ನಂತರ ಮಾಧ್ಯಮಗಳು ಪ್ರಶ್ನೆ ಕೇಳಿದಾಗ ಯುದ್ಧ ಸ್ಮಾರಕಕ್ಕೆ ನಾನು ಗೌರವ ಸಲ್ಲಿಸಲಿಲ್ಲವೇ ಎಂದು ಮರು ಪ್ರಶ್ನೆ ಹಾಕಿದ್ದಾರೆ. 
ಕಾರ್ಯಕ್ರಮದಲ್ಲಿ ಸರ್ಕಾರ ಈ ರೀತಿ ನಡೆದುಕೊಂಡಿದ್ದಕ್ಕೆ ಮಾಜಿ ಸೈನಿಕರು ತೀವ್ರವಾಗಿ ಅಸಮಾಧಾನಗೊಂಡಿದ್ದಾರೆ. ಯುದ್ಧ ಸ್ಮಾರಕಕ್ಕಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮ ಕೇವಲ ರಾಜಕೀಯ ಕಾರ್ಯಕ್ರಮವಾಗಿದ್ದೂ ಮಾತ್ರ ನಿಜಕ್ಕೂ ವಿಪರ್ಯಾಸ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com