ಠಾಣೆಗಳಿಗೆ ಹಠಾತ್ ಭೇಟಿ: ಅವ್ಯವಸ್ಥೆ ಕಂಡು ಗೃಹ ಸಚಿವ ರಾಮಲಿಂಗಾರೆಡ್ಡಿ ಕೆಂಡಾಮಂಡಲ
ರಾಜ್ಯ ಗೃಹ ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ನಗರ ಪೊಲೀಸ್ ಠಾಣೆಗಳಿಗೆ ಶುಕ್ರವಾರ ರಾಮಲಿಂಗಾರೆಡ್ಡಿಯವರು ಹಠಾತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಠಾಣೆಯಲ್ಲಿನ ಅವ್ಯವಸ್ಥೆಗಳನ್ನು ಕಂಡು ಅಧಿಕಾರಿಗಳನ್ನು ತೀವ್ರ...
ಠಾಣೆಗಳಿಗೆ ಹಠಾತ್ ಭೇಟಿ: ಅವ್ಯವಸ್ಥೆ ಕಂಡು ಗೃಹ ಸಚಿವ ರಾಮಲಿಂಗಾರೆಡ್ಡಿ ಕೆಂಡಾಮಂಡಲ
ಬೆಂಗಳೂರು: ರಾಜ್ಯ ಗೃಹ ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ನಗರ ಪೊಲೀಸ್ ಠಾಣೆಗಳಿಗೆ ಶುಕ್ರವಾರ ರಾಮಲಿಂಗಾರೆಡ್ಡಿಯವರು ಹಠಾತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಠಾಣೆಯಲ್ಲಿನ ಅವ್ಯವಸ್ಥೆಗಳನ್ನು ಕಂಡು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಕಬ್ಬನ್ ಪಾರ್ಕ್, ಅಶೋಕ ನಗರ, ಹಲಸೂರು, ಇಂದಿರಾ ನಗರ ಹಾಗೂ ಹಲಸೂರು ಸಂಚಾರ ಠಾಣೆ ಸೇರಿದಂತೆ ಒಟ್ಟು 5 ಠಾಣೆಗಳ ಒಳ ಹಾಗೂ ಹೊರ ಅವ್ಯವಸ್ಥೆ ಕಂಡು ಡಿಸಿಪಿಗಳಾದ ಡಾ.ಚಂದ್ರಗುಪ್ತ ಹಾಗೂ ಅಜಯ್ ಹಿಲೋರಿ ಸೇರಿದಂತೆ ಅಧಿಕಾರಿಗಳಿನ್ನು ರಾಮಲಿಂಗಾ ರೆಡ್ಡಿಯವರು ತರಾಟೆಗೆ ತೆಗೆದುಕೊಂಡರು.
ನಗರದ 5 ಠಾಣೆಗಳಿಗೆ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಅವರೊಂದಿಗೆ ಬಂದ ರಾಮಲಿಂಗಾ ರೆಡ್ಡಿಯವರು ಠಾಣೆಗಳ ಸಿಸಿಟಿವಿ ಕಾರ್ಯನಿರ್ವಹಣೆ, ಶುಚಿತ್ವತೆಯನ್ನು ಪರಿಶೀಲನೆ ನಡೆಸಿದ್ದು. ಈ ವೇಳೆ ಠಾಣೆಯಲ್ಲಿದ್ದ ಅವ್ಯವಸ್ಥೆ ಕಂಡು ಸಚಿವರು ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆಂದು ತಿಳಿದುಬಂದಿದೆ.
ಕೆಲ ಠಾಣೆಗಳಲ್ಲಿ ದೂರು ಪೆಟ್ಟಿಗೆಗಳಿಲ್ಲದಿರುವುದು ಕಂಡು ಬಂದ ಹಿನ್ನಲೆಯಲ್ಲಿ ಅಧಿಕಾರಿಗಳಿಗೆ ಕರೆದ ಸಚಿವರು ಕೂಡಲೇ ದೂರು ಪೆಟ್ಟಿಗೆಯನ್ನು ಹಾಕಿ ಪ್ರತಿನಿತ್ಯ ಪರಿಶೀಲನೆ ನಡೆಸುವಂತೆ ತಿಳಿಸಿದ್ದಾರೆ. ಅಲ್ಲದೆ, ವಶಕ್ಕೆ ಪಡೆದ ವಾಹನಗಳನ್ನು ಠಾಣೆಗಳ ಮುಂದೆ ನಿಲ್ಲಿಸದಂತೆಯೂ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಠಾಣೆಗೆ ಬರುವ ಜನರ ದೂರುಗಳನ್ನು ಸರಿಯಾದ ರೀತಿಯಲ್ಲಿ ಆಲಿಸಿ, ಕಾಲೇಜುಗಳ ಮುಂದೆ ಯುವತಿಯನ್ನು ಚುಡಾಯಿಸುವ ರೋಡ್ ರೋಮಿಯೋಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ರಾಮಲಿಂಗಾ ರೆಡ್ಡಿಯವರು ಕೇವಲ ಪೊಲೀಸ್ ಠಾಣೆಯನ್ನಷ್ಟೇ ಅಲ್ಲದೆ, ಮಹಿಳಾ ಪೊಲೀಸ್ ಅದಿಕಾರಿಗಳ ಸಮಸ್ಯೆಗಳನ್ನು ಇದೇ ವೇಳೆ ಆಲಿಸಿದ್ದಾರೆಂದು ವರದಿಗಳು ತಿಳಿಸಿವೆ.