ಬೆಂಗಳೂರು: 2018 ರ ಫೆಬ್ರವರಿಯಿಂದ ಶ್ರವಣಬೆಳಗೊಳ ಮೂಲಕ ಬೆಂಗಳೂರು-ಮಂಗಳೂರು ಪ್ರಯಾಣಿಕ ರೈಲು ಸಂಚಾರ ಆರಂಭವಾಗಲಿದೆ. ಹಲವು ದಿನಗಳಿಂದ ಪ್ರಯಾಣಿಕರ ಒತ್ತಾಯದ ಮೇರೆಗೆ ಶ್ರವಣ ಬೆಳಗೊಳ ಮೂಲಕ ರೈಲು ಪ್ರಯಾಣಕ್ಕೆ ಅಂತಿಮವಾಗಿ ನೈರುತ್ಯ ರೈಲ್ವೆ ಇಲಾಖೆ ಅನುಮತಿ ನೀಡಿದೆ.
ಇತ್ತೀಚೆಗೆ ಶ್ರವಣ ಬೆಳಗೊಳ ರೈಲು ಮಾರ್ಗ ಉದ್ಘಾಟನೆಯಾಗಿದ್ದು, ಈ ಮಾರ್ಗದ ಮೂಲಕ ಸಂಚರಿಸಿದರೇ ಬೆಂಗಳೂರು-ಮಂಗಳೂರು ನಗರದ ಪ್ರಯಾಣದ ಅವಧಿ ಸುಮಾರು 85 ರಿಂದ 45 ನಿಮಿಷಕ್ಕೆ ಇಳಿಯಲಿದೆ.
21 ವರ್ಷಗಳ ಪ್ರಸ್ತಾವನೆ ನಂತರ ಬೆಂಗಳೂರು-ಹಾಸನ ಮತ್ತು ನೆಲಮಂಗಲ-ಶ್ರವಣಬೆಳಗೊಳ ರೈಲು ಮಾರ್ಗ ಮಾರ್ಚ್ 26 ರಂದು ಆರಂಭಗೊಂಡಿತು. ವಾರದಲ್ಲಿ ನಾಲ್ಕು ಬಾರಿ ಹೊಸ ಮಾರ್ಗದಲ್ಲಿ ರೈಲು ಸಂಚರಿಸಲು ರೈಲ್ವೆ ಇಲಾಖೆ ಒಪ್ಪಿಗೆ ನೀಡಿದೆ. ಸದ್ಯ ಬೆಂಗಳೂರು-ಮಂಗಳೂರು ರೈಲು ಮೈಸೂರು ಮಾರ್ಗದ ಮೂಲಕ ಸಂಚರಿಸುತ್ತಿತ್ತು.
ಫೆಬ್ರವರಿ 10ರಿಂದ ಈ ಮಾರ್ಗದಲ್ಲಿ ಸಂಚಾರ ಪ್ರಾರಂಭಗೊಳ್ಳಲಿದೆ. ವಾರದ ಪ್ರತಿ ಬುಧವಾರ ಗುರುವಾರ ಮತ್ತು ಶುಕ್ರವಾರ ಹಾಗೂ ಶನಿವಾರ ಸಂಜೆ 7.15ಕ್ಕೆ ಬೆಂಗಳೂರಿನಿಂದ ಹೊರಡಲಿರುವ ರೈಲು, ಮರುದಿನ ಬೆಳಗ್ಗೆ 6.20 ಕ್ಕೆ ಮಂಗಳೂರಿಗೆ ತಲುಪಲಿದೆ,
ಯಶವಂತಪುರ, ಕುಣಿಗಲ್, ಶ್ರವಣಬೆಳಗೊಳ, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಮಣ್ಯ ರಸ್ತೆ, ಬಂಟ್ವಾಳ ದಲ್ಲಿ ರೈಲು ಸ್ಟಾಪ್ ನೀಡಲಿದೆ.