ಬೆಳಗಾವಿ: ಎಸ್ಸಿ, ಎಸ್ಟಿ ನೌಕರರ ಬಡ್ತಿ ಮೀಸಲಾತಿಯನ್ನು ಮುಂದುವರೆಸುವ ಸಂಬಂಧ ಬೆಳಗಾವಿ ಅಧಿವೇಶನದಲ್ಲಿ ರಾಜ್ಯ ಸರ್ಕಾರ ಮಂಡಿಸಿದ್ದ ಎಸ್ಸಿ, ಎಸ್ಟಿ ಬಡ್ತಿ ಮೀಸಲಾತಿ ವಿಧೇಯಕವನ್ನು ಶುಕ್ರವಾರ ವಿಧಾನಸಭೆಯಲ್ಲಿ ಅವಿರೋಧವಾಗಿ ಅಂಗೀಕರಿಸಲಾಗಿದೆ.
ಚುನಾವಣಾ ವರ್ಷವಾಗಿರುವುದರಿಂದ ದಲಿತರ ಮತ ಕಳೆದುಕೊಳ್ಳಲು ಬಯಸದ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ವಿಧೇಯಕಕ್ಕೆ ಸಂಬಂಧಿಸಿದಂತೆ ಕೆಲವು ತಾಂತ್ರಿಕ ಅಂಶಗಳನ್ನು ಮಾತ್ರ ಪ್ರಸ್ತಾಪಿಸಿದರು. ಉಳಿದಂತೆ ವಿಧೇಯವಕನ್ನು ಒಮ್ಮತದಿಂದ ಅಂಗೀಕರಿಸಲಾಯಿತು.
ಮುಖ್ಯಮಂತ್ರಿಗಳ ಪರವಾಗಿ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು ಮಂಡಿಸಿದ ಎಸ್ಸಿ, ಎಸ್ಟಿ ಬಡ್ತಿ ಮೀಸಲಾತಿ ವಿಧೇಯಕವನ್ನು ಚರ್ಚೆಯ ಬಳಿಕ ಅಂಗೀಕರಿಸಲಾಯಿತು.
ಕಳೆದ ಫೆಬ್ರವರಿ 9ರಂದು ಸುಪ್ರೀಂ ಕೋರ್ಟ್, ಬಡ್ತಿ ಮೀಸಲಾತಿಯಿಂದಾಗಿ ಇತರೆ ವರ್ಗದರಿಗೆ ಅನ್ಯಾಯ ಆಗಿದ್ದು, ಅನ್ಯಾಯ ಸರಿಪಡಿಸಿ ಎಂದು ತೀರ್ಪು ನೀಡಿತ್ತು. ಹಿಂದುಳಿದಿರುವಿಕೆ ಮಾನದಂಡ ಹಾಗೂ ಕಾರ್ಯದಕ್ಷತೆ ಮೇಲಿನ ಪರಿಣಾಮದ ಕುರಿತು ಮಾಹಿತಿ ನೀಡದ ರಾಜ್ಯ ಸರ್ಕಾರದ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿತ್ತು.