ಪರ್ಯಾಯ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಸನ್ಯಾಸ ಸ್ವೀಕರಿಸಿ 80 ವರ್ಷವಾಗಿರುವ ಹಿನ್ನಲೆಯಲ್ಲಿ ರಾಜಾಂಗಣದಲ್ಲಿ ಹೋಮ, ಹವನ, ಪೂಜಾ ಕೈಂಕರ್ಯಗಳಲ್ಲದೆ, ಶಿಷ್ಯರಿಂದ ಯತಿವಂದನೆ ನಡೆಯುತ್ತಿದೆ...
ಉಡುಪಿ: ಪರ್ಯಾಯ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಸನ್ಯಾಸ ಸ್ವೀಕರಿಸಿ 80 ವರ್ಷವಾಗಿರುವ ಹಿನ್ನಲೆಯಲ್ಲಿ ರಾಜಾಂಗಣದಲ್ಲಿ ಹೋಮ, ಹವನ, ಪೂಜಾ ಕೈಂಕರ್ಯಗಳಲ್ಲದೆ, ಶಿಷ್ಯರಿಂದ ಯತಿವಂದನೆ ನಡೆಯುತ್ತಿದೆ.
5ನೇ ಪರ್ಯಾಯ ಮಹೋತ್ಸವ ನಡೆಯುತ್ತಿರುವ ಪೇಜಾವರ ಶ್ರೀಗಳಿಗೆ ಇದೀಗ 87 ವರ್ಷ ವಯಸ್ಸಾಗಿದೆ. ಬಾಲ ಯತಿಯಾಗಿ ಸನ್ಯಾಸ ಸ್ವೀಕರಿಸಿದ್ದ ಶ್ರೀಗಳು ಇದೀಗ ಹೊಸ ದಾಖಲೆಯನ್ನು ಬರೆದಿದ್ದಾರೆ. ಮಠಕ್ಕೆ ಶ್ರೀಗಳು ಬಂದು 80 ವರ್ಷ ಪೂರೈಸಿದ್ದಾರೆ.
ಹಂಪಿಯಲ್ಲಿ ಸನ್ಯಾಸ ಸ್ವೀಕರಿಸಿದ್ದ ಪೇಜಾವರ ಸ್ವಾಮಾಜಿಗಳಿಗೆ ಅಂದು ಕೇವಲ 7 ವರ್ಷ ವಯಸ್ಸು. ಬಳಿಕ 4 ಪರ್ಯಾಯ ಪೂರೈಸಿ ಇದೀಗ ದಾಖಲೆಯ 5ನೇ ಪರ್ಯಾಯ ನಡೆಸುತ್ತಿದ್ದಾರೆ.
ಪರ್ಯಾಯ ಪೇಜಾವರ ಶ್ರೀಪಾದರ ಪೀಠಾರೋಹಣದ 80ನೇ ವರ್ಧಂತಿ ಅಂಗವಾಗಿ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಬುಧವಾರ ನಡೆದ ಧರ್ಮಸಭೆಯಲ್ಲಿ ಮಾತನಾಡಿದ ಅವರು, ದೇಶ ಹಾಗೂ ಹಿಂದೂ ಧರ್ಮವನ್ನು ಉನ್ನತ ಮಟ್ಟಕ್ಕೆ ಏರಿಸುವುದು ನನ್ನ ಕರ್ತವ್ಯವೆಂದು ನಾನು ಪರಿಗಣಿಸಿದ್ದೆ. ನನ್ನ ಪ್ರಯತ್ನದಲ್ಲಿ ನಾನು ಯಶಸ್ವಿಯಾಗಿದ್ದೇನೆ ಎಂದು ಹೇಳಿದ್ದಾರೆ.
ಮತ್ತೆ 14 ವರ್ಷದ ಬಳಿಕ ಪೇಜಾವರ ಮಠದಲ್ಲಿ ಮತ್ತೆ ಪರ್ಯಾಯ ಮಹೋತ್ಸವ ನಡೆಯುತ್ತದೆ. ಅಲ್ಲಿಯವರೆಗೂ ನಾನು ಬದುಕಿದ್ದರೆ, ಕಿರಿಯರ ಪರ್ಯಾಚ ಮಹೋತ್ಸವವನ್ನು ನೋಡುತ್ತೇನೆಂದು ಹೇಳಿದ್ದಾರೆ.
ಬಳಿಕ ಮಾತನಾಡಿರುವ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆಯವರು, ಹಿಂದೂ ಸಮಾಜದಲ್ಲಿ ಪೇಜಾವರ ಶ್ರೀಗಳು ಮಹಾನ್ ಸನ್ಯಾಸಿಯಾಗಿದ್ದಾರೆ. ಸಮಾಜಕ್ಕೆ ಹಾಗೂ ಆಧ್ಯಾತ್ಮಕ್ಕೆ ಅವರು ನೀಡಿರುವ ಕೊಡುಗೆ ಗಮನಾರ್ಹವಾದದ್ದು ಎಂದು ತಿಳಿಸಿದ್ದಾರೆ.