ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ನಾಗಣಾಪೂರದಲ್ಲಿ ಭಾನುವಾರ ಈರಪ್ಪ ಅಂಗಡಿ ಎನ್ನುವ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಸಾಲಮನ್ನಾಕ್ಕೆ ಒತ್ತಾಯಿಸಿ ಪ್ರಧಾನಿ, ಮುಖ್ಯಮಂತ್ರಿಗೆ ರೈತ ಪತ್ರ ಬರೆದಿದ್ದಾನೆ.
ಸಾಲದ ಸುಳಿಯಲ್ಲಿ ಸಿಲುಕಿ ಆತ್ಮಹತ್ಯೆ ಮಾಡಿಕೊಂಡ ರೈತನ ಮನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೆಹರ್, ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ ಬರೆದ ಪತ್ರಗಳು ಸಿಕ್ಕಿದೆ.
ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿನ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿ ರೈತ ಈರಪ್ಪ ಮಾ.2 ರಂದುಪ್ರಧಾನಿಗೆ ಪತ್ರ ಬರೆದಿದ್ದನು. ಅದಕ್ಕೆ ಪ್ರಧಾನಮಂತ್ರಿ ಕಾರ್ಯಾಲಯದಿಂದ ಮಾ.20ರಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ ಉತ್ತರ ಬಂದಿದ್ದು ಅದರ ನಕಲನ್ನು ಈರಪ್ಪನಿಗೂ ಕಳಿಸಲಾಗಿತ್ತು. ರೈತ ನ ಪತ್ರದ ಬಗ್ಗೆ ಗಮನಹರಿಸುವಂತೆ ಪ್ರಧಾನಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದರು.
"ನಾನು ಒಬ್ಬ ರೈತನಾಗಿದ್ದು ನನ್ನ ಹೆಸರಿನಲ್ಲಿ 4.35 ಗುಂಟೆ ಹಾಗೂ ಪತ್ನಿ ಹೆಸರಿನಲ್ಲಿ 3.30 ಗುಂಟೆ ಜಮೀನಿದೆ. ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ 3 ಲಕ್ಷ ಸಾಲ ಮಾಡಿದ್ದು ಒಟ್ಟು 10 ಲಕ್ಷ ರೂ. ಸಾಲವಿದೆ. ಬೋರ್ ವೆಲ್ನಲ್ಲಿ ನೀರು ದೊರಕದ್ದರಿಂದ ಪೈಪ್ ಲೈನ್ ಮೂಲಕ ನೀರು ಪಡೆಯಲು ಸಾಲ ಮಾಡಿದ್ದೇನೆ. ಸರಿಯಾಗಿ ಮಳೆಯಾಗದ ಪರಿಣಾಮ ಕೃಷಿ ಸಾಲದಿಂದ ಬಳಲಿದ್ದೇನೆ. ಈ ಬಗ್ಗೆ ಡಿ.5, 2015 ರಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದೆ. ಆದರೆ ಅವರು ಸೂಕ್ತ ಪ್ರತಿಕ್ರಿಯೆ ನೀಡದ ಕಾರಣ ಬ್ಯಾಂಕ್ ಗೆ ಅಲೆದಾಡುವಂತಾಗಿದೆ." ಎಂದು ರೈತ ಈರಪ್ಪ ಪತ್ರದಲ್ಲಿ ತನ್ನ್ ಅಳಲನ್ನು ತೋಡಿಕೊಂಡಿದ್ದಾನೆ.
"ನನ್ನ ಎಲ್ಲ ಜಮೀನಿನ ಪಹಣಿ ಪತ್ರ ಹಾಗೂ ಬ್ಯಾಂಕ್ ಗಳಿಂದ ಪಡೆದ ಸಾಲಕ್ಕೆ ಪಹಣಿ ಪತ್ರದಲ್ಲಿ ದಾಕಲೆ ಇದೆ. ಮುಖ್ಯಮಂತ್ರಿ, ಜಿಲ್ಲಾಧಿಕಾರಿ ಹಾಗೂ ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಂದ ನಾನು ಬರೆದ ಪತ್ರಕ್ಕೆ ಬಂದ ಪ್ರತಿಕ್ರಿಯೆ ಗಳನ್ನೂ ಇದರೊಡನೆ ಲಗತ್ತಿಸಿದ್ದೇನೆ. ದಯವಿಟ್ಟು ಪರಿಶೀಲಿಸಿ ನ್ಯಾಯ ಒದಗಿಸಿ" ಎಂದು ಪ್ರಧಾನಿಯನ್ನು ಕೋರಿದ್ದಾನೆ.
ಮೃತ ಈರಪ್ಪನಿಗೆ ಪತ್ನಿ, ಒಬ್ಬ ಪುತ್ರ ಹಾಗೂ ಇಬ್ಬರು ಪುತ್ರಿಯರಿದ್ದಾರೆ. ಈತ ಮೂಲತಃ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ವೆಂಕಟಾಪೂರ ಗ್ರಾಮದವರಾಗಿದ್ದು ಕಳೆದ 15 ವರ್ಷಗಳಿಂದ ಇಲ್ಲಿ ಬೇಸಾಯ ಮಾಡಿಕೊಂಡಿದ್ದರೆನ್ನಲಾಗಿದೆ.