ಬಳ್ಳಾರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದುಬಾರಿ ಹ್ಯೂಬ್ಲಾಟ್ ವಾಚ್ ವಿವಾದ ಪ್ರಕರಣ ಇನ್ನೂ ಮುಗಿದಿಲ್ಲ ಎಂದು ಮಾಜಿ ಡಿವೈಎಸ್ ಪಿ ಅನುಪಮಾ ಶೆಣೈ ಹೇಳಿದ್ದಾರೆ.
ಬಳ್ಳಾರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹ್ಯೂಬ್ಲಾಟ್ ಕೇಸ್ ಇನ್ನೂ ಪೂರ್ಣಗೊಂಡಿಲ್ಲ, ಈ ಸಂಬಂಧ ತಾವು ಪ್ರಧಾನ ಮಂತ್ರಿಯ ಸಿಬ್ಬಂದಿ ಮತ್ತು ತರಬೇತಿ ವಿಭಾಗಕ್ಕೆ ಪತ್ರ ಬರೆದು ಪ್ರಕರಣದ ತನಿಖೆ ನಡೆಸುವಂತೆ ಕೋರಿರುವುದಾಗಿ ಹೇಳಿದ್ದಾರೆ.
ಜೊತೆಗೆ ಈ ಸಂಬಂಧ 34 ದಾಖಲೆಗಳನ್ನು ರವಾನಿಸಿರುವುದಾಗಿಯೂ ತಿಳಿಸಿದ್ದಾರೆ. ಈ ಮೊದಲು ಇದೇ ದಾಖಲಾತಿಗಳನ್ನು ಸಿಬಿಆ ಗೂ ಸಲ್ಲಿಸಿದ್ದರು.
ಆದರೆ ಅನುಪಮಾ ಶೆಣೈ ಅವರು ಸಲ್ಲಿಸಿದ್ದ ಈ ದಾಖಲೆಗಳ ಸಂಬಂಧ ಸಿಬಿಐ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ, ಹಾಗಾಗಿ ಪ್ರಕರಣವನ್ನು ಪ್ರಧಾನ ಮಂತ್ರಿಯ ಸಿಬ್ಬಂದಿ ಮತ್ತು ತರಬೇತಿ ವಿಭಾಗದ ಅಂಗಳಕ್ಕೆ ಕೊಂಡೊಯ್ದಿರುವುದಾಗಿ ಅವರು ತಿಳಿಸಿದ್ದಾರೆ.
ನವೆಂಬರ್ 1 ರಂದು ಕುಡ್ಲಿಗಿಯಲ್ಲಿ ತಮ್ಮ ಹೊಸ ರಾಜಕೀಯ ಪಕ್ಷ ಸ್ಥಾಪಿಸುವುದಾಗಿ ಹೇಳಿರುವ ಅನುಪಮಾ ಶೆಣೈ ರಾಜ್ಯದ ಎಲ್ಲಾ 224 ವಿಧಾನಸಭೆ ಕ್ಷೇತ್ರಗಳಿಂದ ತಮ್ಮ ಪಕ್ಷದ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ ಎಂದು ಹೇಳಿದ್ದಾರೆ.
ಇನ್ನೂ ಡಿವೈಎಸ್ ಪಿ ಗಣಪತಿ ಆತ್ಮಹತ್ಯೆ ಪ್ರಕರಣ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ ಜಾರ್ಜ್ ಅವರ ವಿರುದ್ಧ ಸಿಐಡಿ ಈ ಮೊದಲೇ ಕೇಸ್ ಬುಕ್ ಮಾಡಬೇಕಿತ್ತು ಎಂದು ಅಭಿಪ್ರಾಯ ಪಟ್ಟಿದ್ದಾರೆ.