ಹಾಸನ: ಪ್ರಸಿದ್ದ ಹಾಸನಾಂಬೆ ದೇವಾಲಯ ಅಕ್ಟೋಬರ್ 12 ರಿಂದ ತೆರೆಯಲಿದ್ದು, 11 ದಿನಗಳ ಕಾಲ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ.
ಈ ಸಂಬಂಧ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮುಜರಾಯಿ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ.
ವರ್ಷಕ್ಕೆಮ್ಮೆ ದೇವಾಲಯದ ಬಾಗಿಲು ತೆರೆಯುವುದರಿಂದ ದೇವಿ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ಯಾವುದೇ ತೊಂದರೆಯಾಗದಂತೆ ಎಲ್ಲಾ ಸಿದ್ಧತೆಗಳನ್ನು ನಡೆಸುವಂತೆ ಸಭೆಯಲ್ಲಿ ಚರ್ಚಿಸಲಾಗಿದೆ.
ಪ್ರತಿ ವರ್ಷ ದೇವಾಲಯಕ್ಕೆ ಬರುವ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ 24 ಗಂಟೆಗಳ ಕಾಲ ದರ್ಶನ ವ್ಯವಸ್ಥೆಗೆ ಅನುಕೂಲ ಕಲ್ಪಿಸಲು ಸೂಚಿಸಲಾಗಿದೆ.
ದೇವಾಲಯದ ಗರ್ಭಗುಡಿಯ ಎದುರು ಭಕ್ತಾದಿಗಳನ್ನು ನಿಯಂತ್ರಿಸಲು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು. ಜೊತೆಗೆ ದೇವಾಲಯದ ಧಾರ್ಮಿಕ ಕಟ್ಟು ಪಾಡುಗಳು, ಸರಿಯಾಗಿ ಪಾಲಿಸುವಂತೆ ತಿಳಿಸಿದ್ದಾರೆ.
ಇಲಾಖೆಗಳ ಸಮನ್ವಯತೆ ಅಗತ್ಯವಿದ್ದು, ಎಲ್ಲಾ ಇಲಾಖೆಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು, ಯಾವುದೇ ರೀತಿಯ ಲೋಪಗಳಾಗಬಾರದು ಎಂದು ಹೇಳಿದ್ದಾರೆ.