ಮಧುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತಿದೆ ಮೈಸೂರು: ಅರಮನೆಯಲ್ಲಿ ಖಾಸಗಿ ದರ್ಬಾರ್ ಗೆ ಸಿದ್ಧತೆ

ವಿಶ್ವ ವಿಖ್ಯಾತ ಮೈಸೂರು ದಸರಾಗೆ ಕ್ಷಣ ಗಣನೆ ಆರಂಭವಾಗಿದೆ, ಖಾಸಗಿ ದರ್ಬಾರ್ ಗೆ ಮೈಸೂರು ಅರಮನೆಯಲ್ಲಿ ಸದ್ದಿಲ್ಲದೆ ನವರಾತ್ರಿ ಪ್ರಕ್ರಿಯೆಗಳು ...
ಮೈಸೂರು ಅರಮನೆ
ಮೈಸೂರು ಅರಮನೆ
Updated on
ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾಗೆ ಕ್ಷಣ ಗಣನೆ ಆರಂಭವಾಗಿದೆ, ಖಾಸಗಿ ದರ್ಬಾರ್ ಗೆ  ಮೈಸೂರು ಅರಮನೆಯಲ್ಲಿ ಸದ್ದಿಲ್ಲದೆ ನವರಾತ್ರಿ ಪ್ರಕ್ರಿಯೆಗಳು ಆರಂಭಗೊಂಡಿದೆ. 
ದಸರಾದ ಪ್ರಮುಖ ಆಕರ್ಷಣೆಯಾದ ಅಂಬ ವಿಲಾಸ ಅರಮನೆ ಮಧುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತಿದೆ. ಶ್ರೀಕಂಠದತ್ತ ಒಡೆಯರ್ ವಿಧವಾ ಪತ್ನಿ ಪ್ರಮೋದಾ ದೇವಿ ಖುದ್ದಾಗಿ ನಿಂತು ಸಿದ್ಧತೆಗಳನ್ನು ಗಮನಿಸುತ್ತಿದ್ದಾರೆ. 9 ದಿನಗಳ ಕಾಲ ನಡೆಯುವ ದಸರಾ ಖಾಸಗಿ ದರ್ಬಾರ್ ನಲ್ಲಿ   ಯಧುವೀರ್ ಒಡೆಯರ್ ಗೆ ಧರಿಸಲು ಬೇಕಾದ ಪೇಟಾ, ಆಭರಣ ಹಾಗೂ ಇತರೆ ವಸ್ತುಗಳನ್ನು ಅಂತಿಮಗೊಳಿಸುತ್ತಿದ್ದಾರೆ, ಸಂಪ್ರದಾಯಗಳಲ್ಲಿ ಯಾವುದೇ ವ್ಯತ್ಯಯವಾಗದಂತೆ ತಯಾರಿ ನಡೆಸುತ್ತಿದ್ದಾರೆ.
ರತ್ನ ಖಚಿತ ಸಿಂಹಾಸನ. ಈ ಸಿಂಹಾಸನವನ್ನು ಅರಮನೆಯ ಭದ್ರತಾ ಕೊಠಡಿಯಿಂದ ಹೊರತರಲಾಗುತ್ತದೆ. ಈ ವೇಳೆ ಡಿಸಿ ಮತ್ತು ಅರಮನೆ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿರುತ್ತಾರೆ, ಸೆಪ್ಟಂಬರ್ 15 ರಂದು ನವಗ್ರಹ ಹೋಮ ಮತ್ತು ಶಾಂತಿ ಪೂಜೆ ನಡೆಸಲಾಗುತ್ತದೆ. ಖಾಸಗಿ ದರ್ಬಾರ್ ವೀಕ್ಷಿಸಲು ರಾಜ ಮನೆತನ ತಮ್ಮ ಸ್ನೇಹಿತರು, ಸಂಬಂಧಿಕರು ಮತ್ತು ವಿಐಪಿಗಳಿಗೆ ಆಹ್ವಾನ ನೀಡಿದ್ದಾರೆ. ಜೊತೆಗೆ ಸಾರ್ವಜನಿಕರಿಗೂ ಖಾಸಗಿ ದರ್ಬಾರ್ ವೀಕ್ಷಿಸಲು ಅವಕಾಶ ನೀಡಲಾಗುತ್ತದೆ.
ಸೆಪ್ಟಂಬರ್ 21 ರಂದು ಬೆಳಗ್ಗೆ  7.55ರಿಂದ 8.15ರ ಸಮಯದಲ್ಲಿ  ದಸರಾ ಆಚರಣೆಗೆ ಚಾಲನೆ ನೀಡಲಾಗುತ್ತದೆ, ಈ ವೇಳೆ ಪ್ರಶಸ್ತವಾದ ಮೂಹೂರ್ತದಲ್ಲಿ ಸಿಂಹಾಸನವನ್ನು ಹೊರತೆಗೆದು ಖಾಸಗಿ ದರ್ಬಾರ್ ಆರಂಭವಾಗುತ್ತದೆ.
ಮೈಸೂರು ಅರಮನೆಯ ಚಾಮುಂಡಿ ತೊಟ್ಟಿಯಲ್ಲಿ  ರತ್ನ ಸಿಂಹಾಸನ ಮತ್ತು ಯದುವೀರ್ ಹಣೆಗೆ ಪವಿತ್ರ ದಾರ ಕಟ್ಟಲಾಗುತ್ತದೆ,  ಅರಮನೆಯ ಆನೆಗಳು, ಕುದುರೆಗಳು ಹಸುಗಳು ಮತ್ತಿತರ ಪ್ರಾಣಿಗಳು ಮೆರವಣಿಗೆಯಲ್ಲಿ ಪಾಲ್ಗೋಳ್ಳಲಿವೆ. ರಾಜಪೋಷಾಕು ಧರಿಸಿದ ಯಧುವೀರ್ ಅಂದು ಮಧ್ಯಾಹ್ನ 12.45ರಿಂದ 12 55 ರೊಳಗೆ ಸಿಂಹಾಸನ ಅಲಂಕರಿಸುತ್ತಾರೆ.
ಚಾಮುಂಡೇಶ್ವರಿ ದೇವಿಗೆ ಮಧ್ಯಾಹ್ನ 1.35 ಕ್ಕೆ ಯಧುವೀರ್ ಪೂಜೆ ಸಲ್ಲಿಸಲಿದ್ದಾರೆ.  ನಂತರ ಸೆಪ್ಟಂಬರ್ 27 ರಂದು ಸರಸ್ವತಿ ಪೂಜೆ ನೆರವೇರುತ್ತದೆ.   ನಂತರ ಸೋಮೇಶ್ವರ ದೇವಾಲಯದಲ್ಲಿ ಪೂಜೆ ಹಾಗೂ ಆಯುಧ ಪೂಜೆ ನೆರವೇರಲಿದೆ.
ಸೆಪ್ಟಂಬರ್ 29 ರಂದು  ಸಂಜೆ 7 ಗಂಟೆಗೆ ಖಾಸಗಿ ದರ್ಬಾರ್ ಅಂತ್ಯಗೊಳ್ಳಲಿದೆ. ನಂತರ ಯಧುವೀರ್  ಮರೆವಣಿಗೆಯಲ್ಲಿ ಪಾಲ್ಗೊಂಡು ಭುವನೇಶ್ವರಿ ದೇವಾಲಯದ ಎದುರಿಗಿರುವ ಬನ್ನಿ ವೃಕ್ಷಕ್ಕೆ ಪೂಜೆ ಸಲ್ಲಿಸಲಿದ್ದಾರೆ. 
ದಸರಾ ಮಹೋತ್ಸವದಲ್ಲಿ ಹೆಚ್ಚಾಗಿ ಪ್ರವಾಸಿಗರು ಆಗಮಿಸಲಿದ್ದು , ವಾಹನಗಳ ದಟ್ಟಣೆ, ಪಾರ್ಕಿಂಗ್ ಸಮಸ್ಯೆ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟಕ್ಕೆ ಖಾಸಗಿ ವಾಹನಗಳ ನಿಷೇಧಕ್ಕೆ ಜಿಲ್ಲಾಧಿಕಾರಿ ರಂದೀಪ್ ಅವರಿಗೆ ಪೊಲೀಸರು ಪ್ರಸ್ತಾವನೆ ಸಲ್ಲಿಸಲಾಗಿದೆ. ಸೆಪ್ಟೆಂಬರ್ 21ರಿಂದ ಅಕ್ಟೋಬರ್ 5ರವರೆಗೆ ಖಾಸಗಿ ವಾಹನಗಳನ್ನು ನಿಷೇಧಿಸಿ ಆಷಾಢ ಶುಕ್ರವಾರದ ಮಾದರಿಯಲ್ಲಿ ಲಲಿತ ಮಹಲ್ ಹೆಲಿಪ್ಯಾಡ್‍ನಿಂದ ಕೆಎಸ್‍ಆರ್‍ಟಿಸಿ ಬಸ್‍ಗಳ ಮೂಲಕ ಪ್ರವಾಸಿಗರನ್ನು ಬೆಟ್ಟಕ್ಕೆ ಕರೆದೊಯ್ದು ಮತ್ತೆ ಹಿಂದಿರುಗುವ ವ್ಯವಸ್ಥೆ ಬಗ್ಗೆ ಪ್ರಸ್ತಾವನೆಯಲ್ಲಿ ಸೂಚಿಸಲಾಗಿದೆ. ಬೆಟ್ಟದಲ್ಲಿ ವಾಸಿಸುತ್ತಿರುವವರು, ಗಣ್ಯಾತಿಗಣ್ಯರು ಸಂಚರಿಸಲು ವ್ಯವಸ್ಥೆ ಮಾಡುವಂತೆ ಪೊಲೀಸರು ಜಿಲ್ಲಾಧಿಕಾರಿ ರಂದೀಪ್ ಅವರಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com