ರಾಮನಗರ: ಮೂರು ತಿಂಗಳ ಹಿಂದಷ್ಟೆ ಮದುವೆಯಾಗಿದ್ದ ನವ ದಂಪತಿ ಹಾಗೂ ಇಬ್ಬರು ಮಕ್ಕಳು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ರಾಮನಗರ ತಾಲ್ಲೂಕಿನ ಚಿಕ್ಕೇನಹಳ್ಳಿ ಗ್ರಾಮದಲ್ಲಿ ಭಾನುವಾರ ನಡೆದಿದೆ.
ಶೇಖರ್ (39), ಸುಮಾ(28), ಹಂಸಾ (7) ಮತ್ತು ಧನು (8) ಮೃತ ದುರ್ದೈವಿಗಳು. ಮೂಲತಃ ಚನ್ನಪಟ್ಟಣದ ಹನುಮಂತ ನಗರದ ನಿವಾಸಿಗಳಾದ ಶೇಖರ್ ಮತ್ತು ಸುಮಾ ಇಬ್ಬರು ಮೂರು ತಿಂಗಳ ಹಿಂದೆ ಮದುವೆ ಆಗಿದ್ದರು. ಮದುವೆಯಾದ ಹೊಸತರಲ್ಲಿ ಸುಮಾ ತನ್ನ ಚಿಕ್ಕೇನಹಳ್ಳಿಯ ಅಕ್ಕ ಶಕುಂತಲಾರ ಮನೆಗೆ ಬಂದಿದ್ದರು.
ಇಂದು ರಾಜು ಹಾಗೂ ಶಕುಂತಲ ದಂಪತಿಯ ಮಕ್ಕಳಾದ ಧನುಷ್ ಮತ್ತು ಹಂಸ ಜೊತೆ ಶೇಖರ್ ಹಾಗೂ ಸುಮಾ ಕೆರೆಯ ಬಳಿ ತೆರಳಿದ್ದಾಗ ಮಕ್ಕಳು ಕೆರೆಯಲ್ಲಿ ಈಜಲು ಇಳಿದಿದ್ದರು. ಈ ವೇಳೆ ಕೆರೆಯಲ್ಲಿ ಧನುಷ್ ಹಾಗೂ ಹಂಸ ಮುಳುಗುತ್ತಿದ್ದವರನ್ನ ರಕ್ಷಿಸಲು ಮುಂದಾದ ವೇಳೆ ನಾಲ್ವರು ಕೂಡಾ ನೀರಿನಲ್ಲಿ ಮುಳುಗಿದ್ದಾರೆ. ನಂತರ ಮನೆಗೆ ಯಾರೂ ಹಿಂದಿರುಗದ ಹಿನ್ನೆಲೆಯಲ್ಲಿ ಕೆರೆಯ ಬಳಿ ಬಂದಾಗ ಘಟನೆ ಬೆಳಕಿಗೆ ಬಂದಿದೆ.
ದಂಪತಿಗಳಾದ ಶೇಖರ್ ಹಾಗೂ ಸುಮಾ ಮತ್ತು ಧನುಷ್ ಸ್ಥಳದಲ್ಲಿಯೇ ಮೃತಪಟ್ಟರೆ ಗಂಭೀರ ಸ್ಥಿತಿಯಲ್ಲಿದ್ದ ಹಂಸ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾಳೆ.
ಘಟನೆ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.