ರಾಜ್ಯ
ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ ವಿದ್ಯಾರ್ಥಿಗಳ ನೆರವಿಗೆ 'ಕಲ್ಯಾಣ ಕೇಂದ್ರ' ಸಹಾಯವಾಣಿ
ಸಮಾಜ ಕಲ್ಯಾಣ ಇಲಾಖೆ ನಡೆಯುತ್ತಿರುವ ವಸತಿ ನಿಲಯದಲ್ಲಿ ನೀಡಲಾಗುತ್ತಿರುವ ಆಹಾರ ತಿನ್ನಲು ಯೋಗ್ಯವಾಗಿಲ್ಲವೇ? ಇಲಾಖೆ ನೀಡುತ್ತಿರುವ ವಿದ್ಯಾರ್ಥಿ ವೇತನದಲ್ಲಿ ಸಮಸ್ಯೆಗಳಾಗುತ್ತಿವೆಯೇ? ಒಂದು ವೇಳೆ ನಿಮ್ಮ ಉತ್ತರ ಹೌದು ಎಂದಾದರೆ...
ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆ ನಡೆಯುತ್ತಿರುವ ವಸತಿ ನಿಲಯದಲ್ಲಿ ನೀಡಲಾಗುತ್ತಿರುವ ಆಹಾರ ತಿನ್ನಲು ಯೋಗ್ಯವಾಗಿಲ್ಲವೇ? ಇಲಾಖೆ ನೀಡುತ್ತಿರುವ ವಿದ್ಯಾರ್ಥಿ ವೇತನದಲ್ಲಿ ಸಮಸ್ಯೆಗಳಾಗುತ್ತಿವೆಯೇ? ಒಂದು ವೇಳೆ ನಿಮ್ಮ ಉತ್ತರ ಹೌದು ಎಂದಾದರೆ, ಸಮಸ್ಯೆ ಪರಿಹಾರಕ್ಕೆ ಕೂಡಲೇ 24*7 ಗಂಟೆಯ ಕಲ್ಯಾಣ ಕೇಂದ್ರ ಸಹಾಯವಾಣಿಗೆ ಕರೆ ಮಾಡಿ.
ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಹಿಂದುಳಿದ ವರ್ಗದವರಿಗೆ ಸಿಗಬೇಕಾದ ಸವಲತ್ತು ಪಾರದರ್ಶಕವಾಗಿ ಸಿಗಬೇಕೆಂದು ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ಕಲ್ಯಾಣ ಕೇಂದ್ರ ಸಹಾಯವಾಣಿಯನ್ನು ಆರಂಭಿಸಲಾಗಿದೆ. ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ಯಾವುದೇ ಸಮಸ್ಯೆ, ಸೌಲಭ್ಯಗಳ ಕೊರತೆ, ಇಲಾಖೆ ಯೋಜನೆಗಳ ಕುರಿತು ಇಲ್ಲಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ. ದಿನದ 24 ಗಂಟೆಯೂ ಈ ಕೇಂದ್ರ ಸಾರ್ವಜನಿಕ ಸೇವೆಗೆ ಲಭ್ಯವಿರುತ್ತದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಹೇಳಿದ್ದಾರೆ.
ಮಂಗಳವಾರ ನಗರದ ನೃಪತುಂಗ ರಸ್ತೆಯ ಯವನಿಕಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಹಾಯವಾಣಿ ಕೇಂದ್ರ ಲೋಕಾರ್ಪಣೆಗೊಳಿಸಿ ಪರಮೇಶ್ವರ್ ಅವರು ಮಾತನಾಡಿದ್ದಾರೆ.
ರಾಜ್ಯಾದ್ಯಂತ ಇಲಾಖೆಯ 2,500 ವಿದ್ಯಾರ್ಥಿ ವಸತಿ ನಿಲಯಗಳಿದ್ದು, ಅಲ್ಲಿನ ಲೋಪದೋಷ, ಕುಂದು-ಕೊರತೆ, ವಿದ್ಯಾರ್ಥಿ ವೇತನ, ಕಮಿಷನ್ ಮುಂತಾದ ಸಮಸ್ಯೆಗಳ ಕುರಿತು ವಿದ್ಯಾರ್ಥಿಗಳು ಸಹಾಯವಾಣಿ ಕೇಂದ್ರಕ್ಕೆ ದೂರು ನೀಡಿದ ಕೂಡಲೇ ಅಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ.
ದೂರು ನೀಡಿದ ನಂತರ ದೂರುದಾರರಿಗೆ ಒಂದು ಕ್ಷಿಪ್ರ ನೋಂದಣಿ ಸಂಖ್ಯೆ ನೀಡಲಾಗುತ್ತದೆ ಜೊತೆಗೆ ಸಾರ್ವಜನಿಕರ ಅಹವಾಲನ್ನು ಸ್ವೀಕರಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ಪರಿಹಾರಕ್ಕಾಗಿ ಕಾರ್ಯೋನ್ಮುಖರಾಗಲು ಸೂಚಿಸಲಾಗುವುದು ಎಂದು ತಿಳಿಸಿದ್ದಾರೆ.
ಸಮಾಜ ಕಲ್ಯಾಣ ಇಲಾಖೆ ಸಹಾಯವಾಣಿ ಸಂಖ್ಯೆ 080-22634300, ವಾಟ್ಸ್ಆ್ಯಪ್ ಅಥವಾ ತೆಲಿಗ್ರಾಂ ಸಂಖ್ಯೆ 9901100000 ಆಗಿದ್ದು, ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದೆ. ಇಲಾಖೆಗೆ ಸಂಬಂಧಪಟ್ಟ ಯಾವುದೇ ಮಾಹಿತಿ, ದೂರುಗಳು ಇದ್ದಲ್ಲಿ ಈ ದೂರವಾಣಿ ಸಂಖ್ಯೆಗೆ ಕರೆ ಮಾಡಿ ದಾಖಲಿಸಬಹುದು ಎಂದು ಸಮಾಜಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದಾರೆ.