ಮೈಸೂರು: ಪರಿಸರ ಸ್ನೇಹಿ ಕಂದು ಹಾಳೆಯ ಮೇಲೆ ದಪ್ಪ ಪದರ ಕಂಡುಬಂದರೆ ಅದೇನೆಂದು ಸಂಶಯಪಡಬೇಕಾಗಿಲ್ಲ. ಅದು ಆನೆಯ ಲದ್ದಿಯಿಂದ ಮಾಡಿದ್ದಾಗಿರಬಹುದು. ರಾಜ್ಯ ಸರ್ಕಾರ ಸದ್ಯದಲ್ಲಿಯೇ ಆನೆಯ ಲದ್ದಿಯಿಂದ ಕಚ್ಚಾ ಕಾಗದ ತಯಾರಿಸಲು ಮುಂದಾಗಿದೆ.
ಅರಣ್ಯ ಇಲಾಖೆಯ ಮುಖ್ಯ ಸಂರಕ್ಷಣಾಧಿಕಾರಿ ಜಯರಾಮ್ ಮಾಧ್ಯಮಗಳಿಗೆ ಈ ವಿಷಯ ತಿಳಿಸಿದ್ದಾರೆ. ರಾಜ್ಯದಲ್ಲಿನ ಖಾಸಗಿ ಕಂಪೆನಿಯೊಂದು ಆನೆಯ ಲದ್ದಿಯಿಂದ ಕಚ್ಚಾ ಕಾಗದ ತಯಾರಿಸುವ ಕಾರ್ಯದಲ್ಲಿ ನಿರತವಾಗಿದ್ದು ದುಬಾರೆ ಆನೆ ಶಿಬಿರ ತಾಣದಿಂದ ಲದ್ದಿಯನ್ನು ಪಡೆಯಲು ಅನುಮತಿ ನೀಡಲಾಗಿದೆ ಎಂದರು.
ಸರ್ಕಾರದೊಂದಿಗೆ ಮಾಡಿಕೊಂಡಿರುವ ಒಪ್ಪಂದದಂತೆ ಕಂಪೆನಿಯು ದುಬಾರೆ ಆನೆ ಶಿಬಿರದಿಂದ ಲದ್ದಿಯನ್ನು ಸಂಗ್ರಹಿಸಲಿದೆ. ಅದಕ್ಕೆ ಪ್ರತಿಯಾಗಿ ಅರಣ್ಯ ಇಲಾಖೆಗೆ ಕಂಪೆನಿ ಕಡೆಯಿಂದ ಹಣ ನೀಡಲಾಗುತ್ತದೆ ಎಂದು ತಿಳಿಸಿದರು.
ವಿಶೇಷ ಅಂಚೆ ಚೀಟಿ: ವಿಶ್ವ ಆನೆಗಳ ದಿನದ ಅಂಗವಾಗಿ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದ ಹೊರಗೆ ಆನೆ ಲದ್ದಿಯಿಂದ ತಯಾರಿಸಿದ ವಿಶೇಷ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಾಯಿತು. ಅದನ್ನು ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಸಮರ್ಪಿಸಲಾಯಿತು.
Advertisement