ಮೊದಲಿಗೆ ಕೇಂದ್ರ ಸರ್ಕಾರದಿಂದ ಬಂದ ಈ ಮನವಿಯನ್ನು ನಾನು ತಿರಸ್ಕರಿಸಿದ್ದೆ. ವಾಜಪೇಯಿ ಕವಿತೆ ಅನುವಾದ ಮಾಡಲು ನಾನು ಬಿಜೆಪಿ ವ್ಯಕ್ತಿಯಲ್ಲ. ರಾಜಕೀಯ ವ್ಯಕ್ತಿಗಳು ಪ್ರಧಾನಮಂತ್ರಿಗಳು ಬರೆಯುವ ಕವಿತೆಗಳನ್ನು ನಾನು ಅನುವಾದ ಮಾಡುವುದಿಲ್ಲ ಎಂದು ಹೇಳಿದ್ದೆ. ಅಂದು ಕೇಂದ್ರ ಸಚಿವರಾಗಿದ್ದ ಅನಂತ್ ಕುಮಾರ್ ಅವರು, ನನಗೆ ಕರೆ ಮಾಡಿ, ಅನುವಾದ ಮಾಡುವಂದೆ ಬಲವಂತ ಮಾಡಿದರು. ನನ್ನ ಮಾರ್ಗದರ್ಶಕರೊಬ್ಬರು ನನ್ನೊಂದಿಗೆ ಮಾತನಾಡಿ, ಕವಿತೆಗಳನ್ನು ಕವಿತೆಗಳಂತೆ ನೋಡಿ, ಪ್ರಧಾನಮಂತ್ರಿಗಳು ಬರೆದಿದ್ದಾರೆಂದು ನೋಡಬೇಡಿ. ಬಳಿಕ ನಾನು ಅನುವಾದ ಮಾಡಲು ನಿರ್ಧರಿಸಿದ್ದೆ. ಕೆಲವೇ ತಿಂಗಳಲ್ಲಿ ಆ ಕೆಲಸವನ್ನು ಪೂರ್ಣಗೊಳಿಸಿದ್ದೆ. ವಾಜಪೇಯಿಯವರ 51 ಕವಿತೆಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದೆ. ಇದಲ್ಲದೆ, ಬೆಂಗಳೂರು ಜೈಲಿನಲ್ಲಿದ್ದಾಗ ವಾಜಪೇಯಿಯವರು ಬರೆದಿದ್ದ ಪುಸ್ತಕದಲ್ಲಿದ್ದ 10 ಕವಿತೆಗಳನ್ನೂ ಅನುವಾದ ಮಾಡಿದ್ದೆ. ಈ ಪುಸ್ಕತ 1999ರಲ್ಲಿ ರಾಜಧಾನಿ ದೆಹಲಿಯಲ್ಲಿ ಬಿಡುಗಡೆಗೊಂಡಿತ್ತು ಎಂದು ಕಾತ್ಕರ್ ಅವರು ತಿಳಿಸಿದ್ದಾರೆ.