ಬೆಳಗಾವಿ : ಮೈಸೂರು ನಂತರ ಭೂತರಾಮನಹಟ್ಟಿ ಮೃಗಾಲಯವನ್ನು 2 ನೇ ಅತಿದೊಡ್ಡ ಮೃಗಾಲಯವಾಗಿ ಅಭಿವೃದ್ದಿಪಡಿಸಲಾಗುವುದು ಎಂದು ಶಾಸಕ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಯಮನಕರಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಭೂತರಾಮನಹಟ್ಟಿ ಮೃಗಾಲಯದಲ್ಲಿ ಈಗಾಗಲೇ ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ ಬೇಲಿ ಗೋಡೆಯನ್ನು ನಿರ್ಮಿಸಲಾಗಿದ್ದು, ಸರ್ಕಾರದಿಂದ ಮೂರು ಕೋಟಿ ರೂಪಾಯಿ ಶೀಘ್ರದಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಿದರು.
ಭೂತರಾಮನಹಟ್ಟಿ ಮೃಗಾಲಯ ಅಭಿವೃದ್ದಿಗಾಗಿ ಅರಣ್ಯ ಇಲಾಖೆ ಕೇಂದ್ರಸರ್ಕಾರದ ಜೊತೆಗೆ ಸಮಾಲೋಚನೆ ನಡೆಸಿದ್ದು, ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಮೃಗಾಲಯ ಅಭಿವೃದ್ದಿಪಡಿಸಲು ಸರ್ಕಾರ ಬದ್ಧವಾಗಿದೆ ಎಂದು ಅವರು ತಿಳಿಸಿದರು.
ಸುಮಾರು 5 ಸಾವಿರ ಎಕರೆ ವಿಸ್ತೀರ್ಣವನ್ನು ಈ ಉದ್ಯಾನ ಹೊಂದಿದ್ದು, ಬೆಟ್ಟ ಗುಡ್ಡ ಹಾಗೂ ಕಾಡಿನಿಂದ ಸುತ್ತುವರಿದಿದೆ. ಈಗಾಗಲೇ ಸಣ್ಣ ಪ್ರಮಾಣದಲ್ಲಿ ಪ್ರಾಣಿ ಸಂಗ್ರಹಾಲಯ ಇಲ್ಲಿದೆ. ಮೊಸಳೆ, ಜಿಂಕೆ, ನವಿಲು ಸೇರಿದಂತೆ ವಿವಿಧ ಪ್ರಾಣಿ ಪಕ್ಷಿಗಳು ಇಲ್ಲಿವೆ. ಇದನ್ನು ಇನ್ನಷ್ಟು ಅಭಿವೃದ್ದಿಪಡಿಸಿ ರಾಜ್ಯದ 2 ನೇ ಅತಿದೊಡ್ಡ ಮೃಗಾಲಯವಾಗಿ ಅಭಿವೃದ್ದಿಸುವ ಯೋಚನೆ ಇದೆ.
Advertisement