ಬೆಂಗಳೂರು: ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದಲ್ಲಿ ಈರುಳ್ಳಿ ಹಾಗೂ ಬೆಳ್ಳುಳ್ಳಿ ಕಡ್ಡಾಯ ಹಾಗೂ ಮೊಟ್ಟೆ ನೀಡುತ್ತಿರುವುದು ವಿವಾದಕ್ಕೆ ಕಾರಣವಾಗಿರುವಂತೆ ಬಿಸಿಯೂಟದೊಂದಿಗೆ ಹಣ್ಣು ನೀಡಲು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ.
ಪ್ರತಿದಿನ ಅಥವಾ ಪರ್ಯಾಯ ದಿನಗಳಲ್ಲಿ ಆಯಾ ಖುತುವಿನ ಮಧ್ಯಾಹ್ನದ ಬಿಸಿಯೂಟದಲ್ಲಿ ಹಣ್ಣು ಪರಿಚಯಿಸುವ ಸಂಬಂಧ ಇಲಾಖೆಯ ಅಧಿಕಾರಿಗಳ ಮಟ್ಟದಲ್ಲಿ ಪ್ರಾಥಮಿಕ ಮಟ್ಟದ ಚರ್ಚೆ ನಡೆದಿದೆ.
ಅಕ್ಷಯ ಪಾತ್ರ ಪೌಂಢೇಷನ್ ಬೆಳ್ಳುಳ್ಳಿ ಹಾಗೂ ಈರುಳ್ಳಿಯನ್ನು ಊಟದಲ್ಲಿ ಸೇರಿಸದ ವಿರುದ್ಧ ಶಿಕ್ಷಣ ಇಲಾಖೆ ನೋಟಿಸ್ ಹೊರಡಿಸಿತ್ತು. ಇದು ವಿವಾದಕ್ಕೆ ಕಾರಣವಾದ ನಂತರ ಶಿಕ್ಷಣ ಇಲಾಖೆ ಈ ಚಿಂತನೆ ನಡೆಸಿದೆ ಎಂದು ಅಧಿಕಾರಿಗಳಿಂದ ತಿಳಿದುಬಂದಿದೆ.
ಈ ಸಂಬಂಧ ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ ಶಿಕ್ಷಣ ಇಲಾಖೆ ಪತ್ರ ಬರೆದಿದ್ದು, ಈರುಳ್ಳಿ ಮತ್ತು ಬೆಳ್ಳುಳ್ಳಿಯಲ್ಲಿ ಯಾವ ಪೌಷ್ಠಿಕಾಂಶ ಇದೆ. ಯಾವ ಆಹಾರ ಸಸ್ಯಹಾರಿ ಅಥವಾ ಅದರ ಬದಲು ಯಾವ ಹಣ್ಣು ನೀಡಬಹುದು ಎಂಬ ಬಗ್ಗೆ ಮಾಹಿತಿ ಕೇಳಲಾಗಿದೆ.
ಮಾಹಿತಿಗಾಗಿ ಕಾಯಲಾಗುತ್ತಿದೆ. ಮಾಹಿತಿ ಬಂದ ನಂತರ ಮಧ್ಯಾಹ್ನದ ಬಿಸಿಯೂಟದಲ್ಲಿ ಹಣ್ಣು ಪರಿಚಯಿಸುವ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ಮಧ್ಯೆ ಹಣ್ಣು ವಿತರಣೆಗೆ ಆಕ್ಷಯ ಪಾತ್ರೆ ಪೌಂಡೇಷನ್ ನಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈಗಾಗಲೇ ಬಿಸಿಯೂಟದಲ್ಲಿ ಹಣ್ಣನ್ನು ವಿತರಿಸಲಾಗುತ್ತಿದೆ ಎಂದು ಅಕ್ಷಯ ಪಾತ್ರೆ ಪೌಂಡೇಷನ್ ಕಾರ್ಯತಂತ್ರ ಸಂವಹನ ಮತ್ತು ಯೋಜನಾ ಮುಖ್ಯಸ್ಥ ನವೀನ್ ನೀರಾದ ದಾಸ ಹೇಳಿದ್ದಾರೆ .
ಖುತುವಿನ ಹಣ್ಣು ಅಥವಾ ಬಾಳೆಹಣ್ಣು ವಿತರಿಸಲು ಸರ್ಕಾರ ಚಿಂತನೆ ನಡೆಸಿದ್ದು, ಈ ಸಂಬಂಧ ಮಧ್ಯಾಹ್ನ ಬಿಸಿಯೂಟ ಯೋಜನೆಯಲ್ಲಿ ಸರ್ಕಾರದ ಜೊತೆಗೆ ಸಹಭಾಗಿತ್ವ ಹೊಂದಿರುವ ಸಂಸ್ಥೆಗಳನ್ನು ಮನವೊಲಿಸುವ ಪ್ರಯತ್ನ ನಡೆಸಲಾಗುತ್ತಿದೆ.
Advertisement