ಹುಬ್ಬಳ್ಳಿ: ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹುಬ್ಬಳ್ಳಿಯ ಸರ್ಕ್ಯೂಟ್ ಹೌಸ್ನ ನೂತನ ಅತಿಥಿಗೃಹದ ಸಭಾಭವನದ ಟೇಬಲ್ ದಿಕ್ಕು ಬದಲಿಸುವಂತೆ ಅಧಿಕಾರಿಗಳಿಗೆ ಬುಧವಾರ ಸೂಚಿಸುವ ಮೂಲಕ ವಾಸ್ತು ಮೊರೆ ಹೋದರು.
ಸರ್ಕ್ಯೂಟ್ ಹೌಸ್ ಆವರಣದಲ್ಲಿ ನಿರ್ಮಿಸಿದ ನೂತನ ಅತಿಥಿಗೃಹದ ಉದ್ಘಾಟನೆ ನೆರವೇರಿಸಿದ ನಂತರ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ನೂತನ ಅತಿಥಿ ಗೃಹದ ಸಭಾ ಭವನದಲ್ಲಿ ರೇವಣ್ಣ ಮೀಟಿಂಗ್ ನಡೆಸಿದರು.
ಈ ವೇಳೆ ಮೀಟಿಂಗ್ ಹಾಲ್ನಲ್ಲಿ ಪೂರ್ವ ದಿಕ್ಕಿಗೆ ಬೆನ್ನು, ಪಶ್ಚಿಮ ದಿಕ್ಕಿಗೆ ಮುಖವಾಗುವಂತೆ ಟೇಬಲ್ ಇಟ್ಟಿದ್ದರು. ಮೀಟಿಂಗ್ ಮುಗಿಸಿದ ನಂತರ ಅಧಿಕಾರಿಗಳನ್ನು ಕರೆದು ಪೂರ್ವ ದಿಕ್ಕಿಗೆ ಮುಖವಾಗುವಂತೆ ಪಶ್ಚಿಮ ದಿಕ್ಕಿಗೆ ಟೇಬಲ್ ಹಾಕುವಂತೆ ಸೂಚಿಸಿದರು.
ಅಧಿಕಾರಿಗಳು ತಮ್ಮ ಇಲಾಖೆ ಸಿಬ್ಬಂದಿ ಕರೆಯಿಸಿ ಸಚಿವರು ಹೇಳಿದಂತೆ ಮೀಟಿಂಗ್ ಟೇಬಲ್ನ್ನು ಪೂರ್ವ ದಿಕ್ಕಿನಿಂದ ಪಶ್ಚಿಮ ದಿಕ್ಕಿಗೆ ಬದಲಾಯಿಸಿದರು.
ನಾವು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬರುತ್ತಾರೆ ಎಂದು ನಿರೀಕ್ಷೆ ಮಾಡಿದ್ದೆವು, ಆಧರೆ ಅವರ ಬದಲಿಗೆ ರೇವಣ್ಣ ಆಗಮಿಸಿದರು. ಹಾಗಾಗಿ ನಾವು ಸಿಎಂ ಅವರ ಅನುಕೂಲಕ್ಕೆ ತಕ್ಕಂತೆ ನಾವು ಮೀಟಿಂಗ್ ಟೇಬಲ್ ಅರೇಂಜ್ ಮಾಡಿದ್ದೇವು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.