ಬೆಂಗಳೂರು : ಕೇಂದ್ರ ಬಜೆಟ್ ನಲ್ಲಿ ಕೃಷಿ ಕ್ಷೇತ್ರದಲ್ಲಿ ಕೆಲ ಭರವಸೆಗಳನ್ನ ಮೂಡಿಸಿದ್ದರೂ ಬರಗಾಲ ಹಾಗೂ ಬೆಲೆ ಕುಸಿತದಿಂದ ಕಂಗಲಾಗಿರುವ ರೈತರನ್ನು ಸಾಲದಿಂದ ಮುಕ್ತಗೊಳಿಸುವಲ್ಲಿ ಗಮನಹರಿಸಿಲ್ಲ ಎಂಬಂತಹ ಅಭಿಪ್ರಾಯಗಳು ವ್ಯಕ್ತವಾಗಿವೆ.
ಪ್ರಧಾನಮಂತ್ರಿ ನರೇಂದ್ರಮೋದಿ ನೇತೃತ್ವದ ಸರ್ಕಾರ ಸ್ವಾಮಿನಾಥನ್ ವರದಿ ಅನುಷ್ಟಾನಗೊಳಿಸಿಲ್ಲ ಎಂದು ರಾಜ್ಯ ರೈತ ಸಂಘ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತ ಕುಮಾರ್ ಹೇಳಿದ್ದಾರೆ. ಆದಾಗ್ಯೂ, ಆಹಾರ ಬೆಳೆಗಳಿಗೆ ಸಾಮಾನ್ಯ ಬೆಂಬಲ ಬೆಲೆಯನ್ನು ಏರಿಸುವ ಪ್ರಸ್ತಾವವನ್ನು ಸ್ವಾಗತಿಸುವುದಾಗಿ ತಿಳಿಸಿದ್ದಾರೆ.
ಎಲ್ಲಾ ರೈತರಿಗೂ ಕಿಸಾನ್ ಕ್ರೇಡಿಟ್ ಕಾರ್ಡ್ ನೀಡುವ ಕೇಂದ್ರಸರ್ಕಾರದ ಕ್ರಮವನ್ನು ಕುರುಬೂರು ಶಾಂತಕುಮಾರ್ ಸ್ವಾಗಸಿದ್ದು, ಕೃಷಿ ಉತ್ಪನ್ನಗಳಿಗೆ ಐದು ವರ್ಷಗಳ ಕಾಲ ಶೇಕಡಾ 100 ರಷ್ಟು ತೆರಿಗೆ ವಿನಾಯಿತಿ ನೀಡಲು ನಿರ್ಧರಿಸುವುದು ಒಳ್ಳೆಯ ಕ್ರಮ ಎಂದಿದ್ದಾರೆ.
ಪ್ರಧಾನಮಂತ್ರಿ ಫಸಲು ಭೀಮಾ ಯೋಜನೆಯಡಿ ಬೆಳೆ ವಿಮೆ ವಿಸ್ತರಣೆ ಮಾಡಲಾಗಿದ್ದು, ಬಜೆಟ್ ನಲ್ಲಿ ಕೃಷಿ ಕ್ಷೇತ್ರಕ್ಕೆ 10ರಲ್ಲಿ 5 ಅಂಕವನ್ನು ನೀಡಲಾಗಿದೆ. ಮೋದಿ ಸರ್ಕಾರ ಭರವಸೆ ನೀಡಿ ಅನುಷ್ಠಾನ ಮಾಡದಿರುವ ಪ್ರಸ್ತಾವಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಮುಂದಾಗಬೇಕಾಗಿದೆ ಎಂದು ಅವರು ಒತ್ತಾಯಿಸಿದ್ದಾರೆ.
ಕೃಷಿ ಕ್ಷೇತ್ರಕ್ಕೆ ಮೀಸಲಿಟ್ಟಿರುವ 11 ಸಾವಿರ ಕೋಟಿ ರೂಪಾಯಿಯಲ್ಲಿ ಎಷ್ಟು ಹಣ ರೈತರಿಗೆ ಸೇರಲಿದೆ ಎಂದು ಪ್ರಶ್ನಿಸಿರುವ ರಾಜ್ಯ ರೈತ ಸಂಘ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ,ಬಜೆಟ್ ನಲ್ಲಿ ರೈತರ ಸಾಲದ ಬಗ್ಗೆ ಏನೂ ಮಾತನಾಡಿಲ್ಲ. ದೇಶದ ಬೆನ್ನೆಲುಬು ರೈತರ ಸಾಲ ಮನ್ನಾ ವಿಚಾರ ಕುರಿತು ಯಾವುದೇ ಪ್ರಸ್ತಾಪ ಮಾಡಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Advertisement