ಹುಬ್ಬಳ್ಳಿ: ಕರ್ನಾಟಕ ಮತ್ತು ಗೋವಾ ನಡುವಿನ ಮಹದಾಯಿ ವಿವಾದವನ್ನು ಬಗೆಹರಿಸುವುದು ಕೇಂದ್ರ ಸರ್ಕಾರಕ್ಕೆ ಕಷ್ಟದ ಕೆಲಸವೇನಲ್ಲ. ಯಾವ್ಯಾವುದೋ ವಿವಾದ ಬಗೆಹರಿಸುವ ಪ್ರಧಾನಮಂತ್ರಿಗೆ ಮಹದಾಯಿ ದೊಡ್ಡ ವಿಚಾರವೇ ಅಲ್ಲ ಎಂದು ಹಿರಿಯ ಪತ್ರಕರ್ತ ಡಾ.ಪಾಟೀಲ್ ಪುಟ್ಟಪ್ಪ ಅವರು ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪಾಪು, ಪ್ರಧಾನಿ ಮೋದಿ ಅವರು ಮನಸ್ಸು ಮಾಡಿದರೆ ಶೀಘ್ರವೇ ಸಭೆ ಕರೆದು ರಾಜ್ಯಕ್ಕೆ ನೀರು ಕೊಡಿಸಬಹುದು ಎಂದರು.
ಇದೇ ವೇಳೆ, ಕರ್ನಾಟಕದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಮಹಾದಾಯಿ ವಿವಾದ ಪರಿಹರಿಸುತ್ತೇವೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಷಾ ಹೇಳಿದ್ದಾರೆ. ಆದರೆ ಅಧಿಕಾರ ಸಿಗದಿದ್ದರೆ ವಿವಾದ ಇತ್ಯರ್ಥಗೊಳಿಸುವ ಉದ್ದೇಶ ಇಲ್ಲವೇ? ಎಂದು ಪಾಪು ಖಾರವಾಗಿ ಪ್ರಶ್ನಿಸಿದರು.
ಇನ್ನು ಮಹದಾಯಿ ಹೋರಾಟಗಾರರೊಂದಿಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸಭೆ ನಡೆಸದೇ ಹೋದದ್ದು ಸರಿಯಲ್ಲ. ಆದರೆ, ಕಾಂಗ್ರೆಸ್ಗಿಂತಲೂ ಹೆಚ್ಚು ಜವಾಬ್ದಾರಿ ಕೇಂದ್ರ ಹಾಗೂ ಗೋವಾ, ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಗೆ ಇದೆ ಎಂದರು.