ಬೆಂಗಳೂರು: ಮೊಹಮದ್ ನಲಪಾಡ್ ಹಾಗೂ ಆತನ ಸಹಚರರ ಜಾಮೀನು ಅರ್ಜಿಯ ಆದೇಶವನ್ನು ನ್ಯಾಯಾಲಯ ಮಾರ್ಚ್ 2ಕ್ಕೆ ಕಾಯ್ದಿರಿಸಿರುವ ಬೆನ್ನಲ್ಲೇ ಶಾಸಕ ಎನ್.ಎ.ಹ್ಯಾರಿಸ್ ಮಲ್ಯ ಆಸ್ಪತ್ರೆಗೆ ತೆರಳಿ ವಿದ್ವತ್ ಹಾಗೂ ಅವರ ತಂದೆ ಲೋಕನಾಥನ್ರನ್ನು ಭೇಟಿ ಮಾಡಿದ್ದಾರೆ.
ಮಲ್ಯ ಆಸ್ಪತ್ರೆಗೆ ಬುಧವಾರ ಬೆಳಿಗ್ಗೆ ಬಂದಿದ್ದ ಹ್ಯಾರಿಸ್, ವಿಶೇಷ ವಾರ್ಡ್ಗೆ ಹೋಗಿ ವಿದ್ವತ್ ಜತೆ ಕೆಲ ನಿಮಿಷ ಮಾತನಾಡಿ ಆರೋಗ್ಯದ ಮಾಹಿತಿ ಪಡೆದುಕೊಂಡರು. ವಾರ್ಡ್ನಲ್ಲಿದ್ದ ಲೋಕನಾಥನ್ ಅವರನ್ನು ಹೊರಗೆ ಕರೆದುಕೊಂಡು ಬಂದು ಮಾತನಾಡಿಸಿದರು.
ಹ್ಯಾರಿಸ್ ಭೇಟಿಯನ್ನು ಖಚಿತ ಪಡಿಸಿರುವ ಕುಟುಂಬ ಸದಸ್ಯರು ಬೇರೆ ಯಾವುದೇ ವಿಷಯಗಳ ಬಗ್ಗೆ ಮಾಹಿತಿ ನೀಡಿಲ್ಲ, ಐಸಿಯುನಲ್ಲಿ ಚಿಕಿತ್ಸೆ ಪಡೆಯತ್ತಿರುವ ಯೋಗಾನಂದ ಎಂಬ ಮತ್ತೊಬ್ಬ ರೋಗಿಯನ್ನು ಭೇಟಿ ಮಾಡಲು ಹ್ಯಾರಿಸ್ ಬಂದಿದ್ದರು. ಇದೇ ವೇಳೆ ವಿದ್ವತ್ ಅವರನ್ನು ಭೇಟಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ಹ್ಯಾರಿಸ್ಗೂ ಮುನ್ನ ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಸಹ ಆಸ್ಪತ್ರೆಗೆ ಬಂದಿದ್ದರು. ಅದೇ ವೇಳೆ ಗಾಯಾಳು ಹಾಗೂ ಅವರ ತಂದೆಯ ಜತೆ ಮಾತನಾಡಿ ಆರೋಗ್ಯ ವಿಚಾರಿಸಿದ್ದರು.