ಬೆಂಗಳೂರು : ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ನವೆಂಬರ್ 21ರಿಂದ ಡಿಸೆಂಬರ್ ನಾಲ್ಕರವರೆಗೂ ಎರಡು ಹಂತಗಳಲ್ಲಿ ಸಂತಾನಹರಣ ಚಿಕಿತ್ಸೆ ಬಗ್ಗೆ ಅಭಿಪ್ರಾಯ ಸಂಗ್ರಹಿಸಿದ್ದು, ಕರ್ನಾಟಕದಲ್ಲಿ ಕೇವಲ 306 ಪುರುಷರು ಮಾತ್ರ ಸಂತನಾಹರಣ ಚಿಕಿತ್ಸೆಗೆ ಹೆಸರು ನೋಂದಾಯಿಸಿದ್ದಾರೆ.
ಚಿಕ್ಕಮಗಳೂರು, ಹಾವೇರಿ, ರಾಮನಗರ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ಯಾವೊಬ್ಬ ಪುರುಷರು ಇಂತಹ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲು ಮುಂದಾಗಿಲ್ಲ . ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾಹಿತಿಯಲ್ಲಿ ಈ ವಿಷಯ ಬಹಿರಂಗಗೊಂಡಿದೆ.
2015-16 ರ ರಾಷ್ಟ್ರೀಯ ಆರೋಗ್ಯ ಸಮೀಕ್ಷೆಯಂತೆ ರಾಷ್ಟ್ರಮಟ್ಟದಲ್ಲಿ ಶೇಕಡ 0.3 ರಷ್ಟು ಪುರುಷರು , ಕರ್ನಾಟಕ ರಾಜ್ಯದಲ್ಲಿ ಶೇಕಡ 0.1 ರಷ್ಟು ಮಂದಿ ಪುರುಷರು ಮಾತ್ರ ಶಸ್ತ್ತ ಚಿಕಿತ್ಸೆ ಮಾಡಿಸಿಕೊಳ್ಳಲು ಆಸಕ್ತಿ ಹೊಂದಿರುವ ಬಗ್ಗೆ ಮಾಹಿತಿ ತಿಳಿದುಬಂದಿದೆ.
ಮಹಿಳೆಯರಲ್ಲಿ ರಾಷ್ಟ್ರಮಟ್ಟದಲ್ಲಿ ಅಂದಾಜು ಶೇಕಡಾ 36 ರಷ್ಟು ಮಂದಿ ಶಸ್ತ್ತ ಚಿಕಿತ್ಸೆಗೆ ಆಸಕ್ತಿ ತಾಳಿದರೆ, ಕರ್ನಾಟಕದಲ್ಲಿ ಶೇಕಡಾ 48. 6ರಷ್ಟು ಮಹಿಳೆಯರು ಇಂತಹ ಚಿಕಿತ್ಸೆಗೆ ಮುಂದಾಗುತ್ತಿರುವ ಸಂಗತಿ ಹೊರಬಿದ್ದಿದೆ. ಕುಟುಂಬ ನಿಯಂತ್ರಣ ಯೋಜನೆಯಲ್ಲಿ ಪುರುಷರ ಪಾಲ್ಗೊಳ್ಳುವಿಕೆ ಕುರಿತಂತೆ ಜನಜಾಗೃತಿ ಮೂಡಿಸಬೇಕಾಗಿದೆ. ಇಂತಹ ಕಾರ್ಯಕ್ರಮಗಳು ಯಶಸ್ವಿಗೊಳ್ಳಲು ಪುರುಷರ ಪಾತ್ರ ಮಹತ್ವದಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಸಂತಾನಹರಣ ಶಸ್ತ್ರ ಚಿಕಿತ್ಸೆಯಲ್ಲಿ ರಾಜ್ಯದ ಸಾಧನೆ ಉತ್ತಮವಾಗಿದೆ. ಆದರೆ, ವಿಶ್ವದಾದ್ಯಂತ ಪುರುಷರ ಸಂತಾನಹರಣ ಶಸ್ತ್ರ ಚಿಕಿತ್ಸೆ ಪ್ರಮಾಣಕ್ಕೆ ಹೋಲಿಸಿದ್ದರೆ ಕಡಿಮೆಯಾಗಿದೆ ಎಂದು ಅಂತಾರಾಷ್ಟ್ರೀಯ ಪ್ರಸೂತಿ ಮತ್ತು ಸ್ತ್ರಿ ರೋಗ ತಜ್ಞ ಒಕ್ಕೂಟದ ರಾಯಬಾರಿ ಡಾ. ಹೇಮಾ ದಿವಾಕರ್ ಅಭಿಪ್ರಾಯಪಟ್ಟಿದ್ದಾರೆ.
Advertisement