ಕೇಂದ್ರ- ರಾಜ್ಯ ಸಹಭಾಗಿತ್ವದಲ್ಲಿ ತುಮಕೂರು ಕೈಗಾರಿಕಾ ಕೇಂದ್ರವಾಗಿ ಅಭಿವೃದ್ದಿ
ತುಮಕೂರು ಜಿಲ್ಲೆಯ ವಸಂತನರಸಪುರ ಮುಂದೆ ಬೃಹತ್ ಕೈಗಾರಿಕೆಗಳ ಕೇಂದ್ರ ಸ್ಥಳವಾಗಲಿದೆ.ತುಮಕೂರನ್ನು ಕೈಗಾರಿಕಾ ಕೇಂದ್ರವಾಗಿ ರೂಪಿಸಲು ಕೇಂದ್ರ, ರಾಜ್ಯಸರ್ಕಾರಗಳ ನಡುವೆ ಒಪ್ಪಂದವೇರ್ಪಟ್ಟಿದೆ.
ತುಮಕೂರು: ತುಮಕೂರು ಜಿಲ್ಲೆಯ ವಸಂತನರಸಪುರ ಮುಂದೆ ಬೃಹತ್ ಕೈಗಾರಿಕೆಗಳ ಕೇಂದ್ರ ಸ್ಥಳವಾಗಲಿದೆ. ಚೆನ್ನೈ - ಬೆಂಗಳೂರು ಕೈಗಾರಿಕಾ ಕಾರಿಡಾರ್ ಭಾಗವಾಗಿ ತುಮಕೂರನ್ನು ಕೈಗಾರಿಕಾ ಕೇಂದ್ರವಾಗಿ ರೂಪಿಸಲು ಕೇಂದ್ರ ಹಾಗೂ ರಾಜ್ಯಸರ್ಕಾರಗಳ ನಡುವೆ ಒಪ್ಪಂದವೇರ್ಪಟ್ಟಿದೆ.
ಷೇರುದಾರರೊಂದಿಗಿನ ಒಪ್ಪಂದಕ್ಕೆ ಸರ್ಕಾರ ಸಹಿ ಮಾಡಿದೆ. ಅಲ್ಲದೇ,ಕೇಂದ್ರ ಹಾಗೂ ರಾಜ್ಯಸರ್ಕಾರದ ಜಂಟಿ ಮಾಲಿಕತ್ವದಲ್ಲಿ ತುಮಕೂರಿನಲ್ಲಿ ಎಸ್ ಪಿವಿ ಅಭಿವೃದ್ದಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಇಂದು ನಡೆದ ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಹಾಗೂ ಬೃಹತ್ ಕೈಗಾರಿಕಾ ಸಚಿವ ಕೆ. ಜೆ. ಜಾರ್ಜ್ ಪಾಲ್ಗೊಂಡಿದ್ದರು.
ಬಳಿಕ ಮಾತನಾಡಿದ ಕೆ. ಜೆ. ಜಾರ್ಜ್, ತುಮಕೂರು ಮುಂದೆ ದಕ್ಷಿಣದಲ್ಲಿ ಕೈಗಾರಿಕಾ ಕೇಂದ್ರವಾಗಿ ರೂಪುಗೊಳ್ಳುವ ಸಾಧ್ಯತೆ ಇದೆ. ಪ್ರತಿಭಾವಂತ ಲಕ್ಷಾಂತರ ಯುವ ಜನಾಂಗಕ್ಕೆ ಉದ್ಯೋಗ ದೊರಕಲಿದೆ . ಕೈಗಾರಿಕೆಗಳ ಅಭಿವೃದ್ದಿಗಾಗಿ ರಾಜ್ಯಸರ್ಕಾರ ಉಚಿತವಾಗಿ ಭೂಮಿ ನೀಡುತ್ತಿದೆ ಎಂದು ತಿಳಿಸಿದರು.
ಕೃಷಿ ಭೂಮಿ ಮೇಲಿನ ಹೂಡಿಕೆಗಾಗಿ ಕೇಂದ್ರಸರ್ಕಾರ ಶೇ. 50 ರಷ್ಟು ಕೊಡುಗೆ ನೀಡುತ್ತಿದ್ದರೆ, ಕೇಂದ್ರಸರ್ಕಾರ ಕೂಡಾ ಅಷ್ಟೇ ಪ್ರಮಾಣದ ಹಣ ನೀಡಲಿದ್ದು, ಮೂಲಸೌಕರ್ಯ ಅಭಿವೃದ್ದಿಗಾಗಿ 3 ಸಾವಿರ ಕೋಟಿ ರೂಪಾಯಿಯಷ್ಟು ಹಣಕಾಸು ನೆರವು ನೀಡಲಿದೆ.
ಚೆನ್ನೈ ಬೆಂಗಳೂರು ಕೈಗಾರಿಕಾ ಕಾರಿಡಾರ್ ಐದು ವಿಶೇಷ ಆರ್ಥಿಕ ಮತ್ತು ಕೈಗಾರಿಕಾ ಕಾರಿಡಾರ್ ಗಳಲ್ಲಿ ಒಂದಾಗಿದ್ದು, ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ಸುತ್ತಮುತ್ತಲಿನ 16 ಜಿಲ್ಲೆಗಳಲ್ಲಿ ಕೈಗಾರಿಕಾ ಘಟಕಗಳು ನಿರ್ಮಾಣವಾಗಲಿವೆ.
ಶೀಘ್ರದಲ್ಲಿಯೇ ಕಾಮಗಾರಿ ಆರಂಭಗೊಳ್ಳಲಿದ್ದು. ಇದರಿಂದ 2 ಲಕ್ಷದ 20 ಸಾವಿರ ಜನರಿಗೆ ಉದ್ಯೋಗ ದೊರಕಲಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ ತಿಳಿಸಿದ್ದಾರೆ.
ನೋಡ್ ಅಭಿವೃದ್ದಿಗಾಗಿ 9,629 ಎಕರೆ ಭೂಮಿಯನ್ನು ಸರ್ಕಾರ ಗುರುತಿಸಿದ್ದು, 1,722 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ಉಳಿದಿರುವ 7900 ಎಕರೆ ಭೂ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಾಗಿದೆ.