ಬೆಂಗಳೂರು: 2006-07ರಲ್ಲಿ ಜೆ.ಶಶಿಧರ ಪ್ರಸಾದ್ ಮೈಸೂರು ವಿಶ್ವವಿದ್ಯಾಲಯದ ಉಪ ಕುಲಪತಿಗಳಾಗಿದ್ದಾಗ ನೇಮಕಗೊಂಡಿದ್ದ ನೂರಕ್ಕೂ ಹೆಚ್ಚು ಬೋಧಕ ಸಿಬ್ಬಂದಿಗಳ ನೇಮಕಾತಿಯನ್ನು ರದ್ದುಗೊಳಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್ ತಳ್ಳಿಹಾಕಿದೆ. ಇದರಿಂದ ಇಲ್ಲಿಯವರೆಗೆ ಆತಂಕದಲ್ಲಿದ್ದ ಹಲವು ಬೋಧಕ ಸಿಬ್ಬಂದಿ ನಿರಾತಂಕಗೊಂಡಿದ್ದಾರೆ.
ನೇಮಕಾತಿ ಪ್ರಕ್ರಿಯೆಯಲ್ಲಿ ಹಲವು ಅಕ್ರಮಗಳು ನಡೆದಿವೆ ಎಂದು ಹೈಕೋರ್ಟ್ ಮಾಜಿ ನ್ಯಾಯಾಧೀಶ ಹೆಚ್ ರಂಗವಿಠಲಾಚಾರ್ ಅವರ ವರದಿಯನ್ನು ಆಧರಿಸಿ ರಾಜ್ಯ ಸರ್ಕಾರ ನೇಮಕಾತಿಯನ್ನು ರದ್ದುಗೊಳಿಸಿತ್ತು. ಈ ಪ್ರಕರಣವನ್ನು ಪ್ರಶ್ನಿಸಿ ಸಿಬ್ಬಂದಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದೀಗ ನ್ಯಾಯಾಲಯ, ಯಾವ ನೌಕರರ ನೇಮಕಾತಿ ಕಾನೂನು ಪ್ರಕ್ರಿಯೆಗೆ ವಿರುದ್ಧವಾಗಿದೆ ಎಂದು ವರದಿಯಲ್ಲಿದೆಯೊ ಅಂತಹ ನೌಕರರಿಗೆ ವೈಯಕ್ತಿಕ ನೊಟೀಸ್ ನೀಡಲು ಸರ್ಕಾರಕ್ಕೆ ಸ್ವಾತಂತ್ತ್ಯ ನೀಡಿದೆ. ಅಲ್ಲದೆ ಮಾಜಿ ಉಪ ಕುಲಪತಿ ಮಾಡಿರುವ ನೇಮಕಾತಿಯ ಮೌಲ್ಯದ ಬಗ್ಗೆ ಹೊಸ ಆದೇಶ ಹೊರಡಿಸಬೇಕಾದರೆ ವಿವರಣೆ ಬಯಸಬಹುದು ಎಂದು ಹೇಳಿದೆ. ಹಲವು ಬೋಧಕ ಸಿಬ್ಬಂದಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ಎ ಎಸ್ ಬೋಪಣ್ಣ ಈ ಆದೇಶ ಹೊರಡಿಸಿದ್ದಾರೆ.
ಸರ್ಕಾರದಿಂದ ರದ್ದುಗೊಂಡ ಬೋಧಕ ಸಿಬ್ಬಂದಿಗಳು ತಮ್ಮ ನೇಮಕಾತಿಯನ್ನು ರದ್ದುಗೊಳಿಸುವ ಮೊದಲು ನಮ್ಮ ಅಭಿಪ್ರಾಯಗಳನ್ನು ಹೇಳುವ ಅವಕಾಶವನ್ನು ಸರ್ಕಾರ ನೀಡಿರಲಿಲ್ಲ. ಏಕಾಏಕಿ ರದ್ದುಮಾಡಿದೆ. ಇದರಿಂದ ನ್ಯಾಯದ ಮೌಲ್ಯಗಳಿಗೆ ಧಕ್ಕೆಯುಂಟಾಗಿದೆ ಎಂದು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಸಿಬ್ಬಂದಿಗಳ ನೇಮಕಾತಿಯಲ್ಲಿ ವಿಶ್ವವಿದ್ಯಾಲಯ ನಿಯಮ ಉಲ್ಲಂಘಿಸಿದ್ದ ಬಗ್ಗೆ ಮಾತ್ರ ರಾಜ್ಯ ಸರ್ಕಾರ ಅಂದು ವಿವರಣೆ ಕೋರಿತ್ತು.
ಇನ್ನೊಂದೆಡೆ ಬೀದರ್ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಚೆನ್ನಣ್ಣ ಸಿ ಅವರನ್ನು ತೆಗೆದುಹಾಕುವ ನಿರ್ಣಯಕ್ಕೆ ಕೂಡ ಹೈಕೋರ್ಟ್ ತಡೆ ನೀಡಿದೆ.
Advertisement