ಬೆಂಗಳೂರು: ಖಾಸಗಿ ವಿಶ್ವವಿದ್ಯಾಲಯಗಳು ನೀಡುವ ಕೃಷಿಗ ಸಂಬಂಧಪಟ್ಟ ಕೋರ್ಸ್ ವಿರೋಧಿಸಿ ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ನಡೆಸುತ್ತಿರುವ ತೀವ್ರ ಪ್ರತಿಭಟನೆ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಕರ್ನಾಟಕ ರಾಜ್ಯ ಕೃಷಿ ವಿಶ್ವವಿದ್ಯಾಲಯ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ.
ಈ ಸಂಬಂಧ ಪ್ರಸ್ತಾವನೆಯನ್ನು ಉನ್ನತ ಶಿಕ್ಷಣ ಇಲಾಖೆಗೆ ಸಲ್ಲಿಸಲಾಗಿದ್ದು ಖಾಸಗಿ ವಿಶ್ವವಿದ್ಯಾಲಯಗಳು ಕೃಷಿ ಸಂಬಂಧಿತ ಕೋರ್ಸ್ ಗಳನ್ನು ನೀಡದಂತೆ ತಡೆಗಟ್ಟಲು ಈಗಿರುವ ಕಾನೂನಿಗೆ ತಿದ್ದುಪಡಿ ತರಲು ಮುಂದಾಗಿದ್ದೇವೆ ಎಂದು ಕೃಷಿ ಖಾತೆ ಸಚಿವ ಎನ್ ಎಚ್ ಶಿವಶಂಕರ್ ರೆಡ್ಡಿ ತಿಳಿಸಿದ್ದಾರೆ. ಈಗಿರುವ ಕಾನೂನುಗಳನ್ನು ಉಲ್ಲಂಘಿಸಿದರೆ ಖಾಸಗಿ ವಿಶ್ವವಿದ್ಯಾಲಯಗಳಿಗೆ ದಂಡ ಹೇರುವ ಕಾನೂನು ರಚನೆಗೆ ಕೂಡ ಇಲಾಖೆ ಮುಂದಾಗಿದೆ.
ಬೆಂಗಳೂರು ಸಮೀಪ ದೊಡ್ಡಬಳ್ಳಾಪುರದಲ್ಲಿ ಕರ್ನಾಟಕ ರಾಜ್ಯ ಖಾಸಗಿ ವಿಶ್ವವಿದ್ಯಾಲಯ ಕಾಯ್ದೆಯಡಿ ಖಾಸಗಿ ರೈ ಟೆಕ್ನಾಲಜಿ ಯೂನಿವರ್ಸಿಟಿಯನ್ನು ಸ್ಥಾಪಿಸಲಾಗಿದ್ದರೂ ಕೂಡ ಅದಕ್ಕೆ ಕೃಷಿ ಸಂಬಂಧಿತ ಕೋರ್ಸ್ ಗಳನ್ನು ಒದಗಿಸಲು ಭಾರತೀಯ ಕೃಷಿ ಸಂಶೋಧನೆ ಮಂಡಳಿಯಿಂದ(ಐಸಿಎಆರ್) ಅನುಮತಿ ಸಿಕ್ಕಿಲ್ಲ. ವಿದ್ಯಾರ್ಥಿಗಳ ಹಾಜರಾತಿ ಮತ್ತು ಶುಲ್ಕ ವಿಚಾರದಲ್ಲಿ ಕಾಲೇಜು ಯಾವುದೇ ಮಾರ್ಗಸೂಚಿಗಳನ್ನು ಅನುಸರಿಸಲು ವಿಫಲವಾಗಿದೆ ಎಂದು ಬಿಜೆಪಿ ವಿಧಾನಪರಿಷತ್ ಸದಸ್ಯ ಎನ್ ರವಿಕುಮಾರ್ ಹೇಳಿದ್ದಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಭೈರೇಗೌಡ ಮಾತನಾಡಿ, ವಿಶ್ವವಿದ್ಯಾಲಯ ಐಸಿಎಆರ್ ನ್ನು ಮೂರು ವರ್ಷಗಳ ಹಿಂದೆ ಸಂಪರ್ಕಿಸಿದ್ದರೂ ಕೂಡ ಮಂಡಳಿ ಈ ಕುರಿತು ನಿರ್ಧಾರ ಮಾಡಿಲ್ಲ. ವಿಶ್ವವಿದ್ಯಾಲಯಗಳು ಯಾವುದೇ ವಿಶ್ವವಿದ್ಯಾಲಯಗಳ ಅಡಿಯಲ್ಲಿ ಬರುವುದಿಲ್ಲವಾದ್ದರಿಂದ ಭಾರತೀಯ ಕೃಷಿ ಸಂಶೋಧನಾ ಮಂಡಳಿಯನ್ನು ಸಂಪರ್ಕಿಸಿದೆವು ಎಂದು ಹೇಳಿದರು. ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗಬಾರದೆಂದು ಅಂತಹ ವಿದ್ಯಾರ್ಥಿಗಳನ್ನು ಹಿಂಪಡೆಯುವ ಕುರಿತು ಕೂಡ ಸರ್ಕಾರ ಚಿಂತನೆ ನಡೆಸಿದೆ ಎಂದರು.
Advertisement