ಮೈಸೂರು: ತಾನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಆಪ್ತ ಸಹಾಯಕ(ಪಿಎ) ಎಂದು ಹೇಳಿಕೊಂಡು ಜನರಿಗೆ ಲಕ್ಷಾಂತರ ರುಪಾಯಿ ವಂಚಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ.
ಪುನೀತ್ ಜತೆಯಲ್ಲೇ ಇರೋ ಕೆಲಸ ಕೊಡಿಸುತ್ತೇನೆ. ಅವರೊಂದಿಗೆ ಮಾತನಾಡಿಸುತ್ತೇನೆ ಎಂದು ಹೇಳಿ ಸಂಬಂಧಕರಿಗೆ ಹಾಗೂ ಗೆಳಯರಿಗೆ ಲಕ್ಷಾಂತರ ರುಪಾಯಿ ಪಂಗನಾಮ ಹಾಕಿದ್ದಾನೆ.
ಮೂಲತಃ ಮೈಸೂರಿನ ಟಿ.ನರಸೀಪುರ ಬಳಿಯ ಅಂಕನಹಳ್ಳಿ ನಿವಾಸಿಯಾಗಿರುವ 28 ವರ್ಷದ ರವಿ ಈಗ ಬೆಂಗಳೂರಿನ ಶ್ರೀನಿವಾಸನಗರದಲ್ಲಿ ವಾಸಿಸುತ್ತಿದ್ದು, ತನ್ನ ತಂಗಿ ಮದುವೆ ಖರ್ಚಿಗಾಗಿ ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಅಮಾಯಕರಿಗೆ ವಂಚಿಸಿದ್ದಾರೆ.
ರವಿ, ಪುನೀತ್ ರಾಜ್ ಕುಮಾರ್ ಆಪ್ತ ಸಹಾಯಕ ಎಂದು ನಂಬಿ ಹಣ ಕೊಟ್ಟವರು ಮೋಸ ಹೋದ ಅಮಾಯಕರು ಈಗ ವಂಚಕನ ವಿರುದ್ಧ ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಮದುವೆ ಕೆಲಸಕ್ಕೆ ಬಂದಿದ್ದ ಪೋಟೋಗ್ರಾಫರ್,ಪ್ಲವರ್ ಡೆಕೋರೇಟರ್, ಕಾರು ಚಾಲಕನಿಗೂ ರವಿ ಮೋಸ ಮಾಡಿದ್ದು, ಲಕ್ಷಾಂತರ ಹಣ ಪೀಕಿ ಮದುವೆ ನಂತರ ಎಸ್ಕೇಪ್ ಆಗಿದ್ದಾನೆ.
ಮದುವೆ ನಂತರ ರವಿ ನಾಪತ್ತೆಯಾದಾಗಲೇ ತಾವು ಮೋಸ ಹೋಗಿರುವುದು ಅವರ ಸಂಬಂಧಿ ರಮೇಶ್ ಮತ್ತವರ ಸಂಗಡಿಗರಿಗೆ ಖಚಿತವಾಗಿದೆ. ಬೆಂಗಳೂರಿನ ಮನೆಯಲ್ಲೂ ರವಿ ಕೈಗೆ ಸಿಗುತ್ತಿಲ್ಲ. ಮೈಸೂರಿನತ್ತ ತಲೆಯನ್ನೂ ಹಾಕುತ್ತಿಲ್ಲ. ರವಿಯ ಶೋಅಪ್ ಮಾತಿಗೆ ಬೆರಗಾಗಿ ಹಣ ಕೊಟ್ಟವರು ಇದೀಗ ಆಕಾಶ ನೋಡುತ್ತಿದ್ದಾರೆ.