ಕೋಲಾರ: ಮಾರುಕಟ್ಟೆಯಲ್ಲಿ ರೇಷ್ಮೆ ಗೂಡಿನ ಧಾರಣೆ ಕುಸಿತದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ರೇಷ್ಮೆ ಬೆಳೆಗಾರರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ.
ಕೋಲಾರ ತಾಲೂಕಿನ ಮಟ್ಟಳಾ ಹಳ್ಳಿಯಲ್ಲಿ ಈ ಘಟನೆ ನಡೆದಿದ್ದು,ರೇಷ್ಮೆ ಬೆಳೆಗಾರ ವೆಂಕಟೇಶಪ್ಪ (55) ಮೃತಪಟ್ಟ ದುರ್ದೈವಿ.
ಈತ ನಾಲ್ಕು ಎಕರೆ ಜಮೀನು ಹೊಂದಿದ್ದು, ಮಾರುಕಟ್ಟೆಯಲ್ಲಿ ಕೇವಲ 300 ರೂಪಾಯಿಗೆ ರೇಷ್ಮೆ ಗೂಡು ಮಾರಾಟ ಮಾಡಿದ್ದ ಎನ್ನಲಾಗಿದೆ.
ಬ್ಯಾಂಕು ಹಾಗೂ ಖಾಸಗಿ ಸಾಲದಾರರಿಂದ ಅಧಿಕ ಪ್ರಮಾಣದ ಸಾಲ ಮಾಡಿದ್ದರಿಂದ ಕಳೆದ ಮೂರು ದಿನಗಳಿಂದ ಆತ ಮಾನಸಿಕ ಖಿನ್ನತೆಗೊಳಗಾಗಿದ್ದ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ವೆಂಕಟೇಶಪ್ಪ ಆತ್ಮಹತ್ಯೆ ಬಳಿಕ ರೈತರು ಮೃತನ ಕುಟುಂಬ ಸದಸ್ಯರಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಧರಣಿ ನಡೆಸಿದರು.