ಬೆಂಗಳೂರು: ತಿರುಪತಿ ಬಾಲಾಜಿ ಕುರಿತಂತೆ ಟಿವಿ ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ ನಿಡಿದ್ದ ಆರ್ ಟಿಐ ಕಾರ್ಯಕರ್ತ ನರಸಿಂಹಮೂರ್ತಿ ಅವರನ್ನು ಯಶವಂತಪುರ ಪೋಲೀಸರು ಬಂಧಿಸಿದ್ದಾರೆ. ಕರ್ನಾಟಕ ಹೈಕೋರ್ಟ್ ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ನರಸಿಂಹಮೂರ್ತಿ ಬಂಧನವಾಗಿದೆ.
ವಿವಾದಾತ್ಮಕ ಹೇಳಿಕೆ ಸಂಬಂಧ ಸುಮಾರು ಒಂದು ತಿಂಗಳ ಹಿಂದೆ ದೂರು ದಾಖಲಾಗಿದ್ದರೂ ಇದುವರೆಗೆ ಪೋಲೀಸರು ಯಾವುದೇ ಕ್ರಮ ಜರುಗಿಸಿರಲಿಲ್ಲ ಏಕೆಂದು ಹೈಕೋರ್ಟ್ ಮಂಗಳವಾರ ಪ್ರಶ್ನಿಸಿತ್ತು.
ದೂರು ದಾಖಲಾಗಿ ತಿಂಗಳಾದರೂ ಪೋಲೀಸರು ಯಾವ ಕ್ರಮ ಜರುಗಿಸಲಿಲ್ಲ ಏಕೆ ಎಂದು ಪ್ರಶ್ನಿಸಿ ಬಿ.ಎಂ. ಸುರೇಶ್ ಎನ್ನುವವರು ಸಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾ. ಅರವಿಂದ ಕುಮಾರ್ ಅವರಿದ್ದ ಏಕಸದಸ್ಯ ಪೀಠವು ಪೋಲೀಸರನ್ನು ತರಾಟೆಗೆ ತೆಗೆದುಕೊಂಡಿದೆ.
ನ್ಯಾಯಾಲಯದ ಆದೇಶದ ಬಳಿಕ ನರಸಿಂಹಮೂರ್ತಿಯನ್ನು ಬಂಧಿಸಲಾಗಿದೆ. ಮಂಗಳವಾರ ಸಂಜೆ 4.30ರ ವೇಳೆಗೆ ಈ ವಿಷಯವನ್ನು ಸರ್ಕಾರಿ ವಕೀಲರಾದ ವಿಜಯ್ ಕುಮಾರ್ ಪಾಟೀಲ್ ಮೆಮೋ ಮೂಲಕ ನ್ಯಾಯಪೀಠಕ್ಕೆ ತಿಳಿಸಿದ್ದಾರೆ.
ಅರ್ಜಿ ಪ್ರಕಾರ ನರಸಿಂಹಮೂರ್ತಿಯು ಖಾಸಗಿ ಟಿವಿ ವಾಹಿನಿಯ ಸಂದರ್ಶನದ ವೇಳೆ ತಿರುಪತಿ ವೆಂಕಟೇಶ್ವರ ದೇವರ ಹಣೆಯ ನಾಮದ ಕುರಿತಂತೆ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಇದಕ್ಕಾಗಿ ಅವರ ವಿರುದ್ಧ ಐಪಿಸಿ ಸೆಕ್ಷನ್ 295 ಎ ಮತ್ತು 298 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.