ಶಿವಮೊಗ್ಗ: ಟಿಪ್ಪು ಸುಲ್ತಾನ್ ಆಳ್ವಿಕೆ ಸಮಯದಲ್ಲಿ ಬಳಸಲಾಗುತ್ತಿದ್ದ ರಾಕೆಟ್ ಗಳನ್ನು ಇತ್ತೀಚೆಗೆ ನಡೆದ ಉತ್ಖನನ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಹಳೆ ಬಿದನೂರು ಗ್ರಾಮದಲ್ಲಿ ಸಿಕ್ಕಿದೆ. ಪುರಾತತ್ವ, ವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ(ಡಿಎಎಂಎಚ್) ಕೆಳದಿ ವಂಶದವರು ಆಳುತ್ತಿದ್ದ ಪ್ರದೇಶದಲ್ಲಿ ಸಿಕ್ಕಿರುವ ರಾಕೆಟ್ ಗಳನ್ನು ಸಂಶೋಧನೆ ನಡೆಸುತ್ತಿದೆ.
ಈ ರಾಕೆಟ್ ಪತ್ತೆಯಾಗಿರುವುದು ಹೈದರಾಲಿ, ಟಿಪ್ಪು ಸುಲ್ತಾನ, ಮೈಸೂರಿನ ವಂಶಜರು ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಆಳುತ್ತಿದ್ದ ಕೆಳದಿ ವಂಶದವರ ಮಧ್ಯೆ ಸ್ನೇಹಸಂಬಂಧ ಇತ್ತೆ ಎಂದು ತಿಳಿಯುವ ಸವಾಲು ಇದೀಗ ಇತಿಹಾಸತಜ್ಞರಿಗೆ ಮತ್ತು ಪುರಾತತ್ತ್ವಜ್ಞರಿಗೆ ಎದುರಾಗಿದೆ.
ಕಳೆದ 25ರಂದು ಡಿಎಎಂಎಚ್ ಆಯುಕ್ತ ಜಿ ವೆಂಕಟೇಶ್ ಅವರ ಮಾರ್ಗದರ್ಶನದಲ್ಲಿ ಉತ್ಖನನ ಇಲಾಖೆಯ ತಂಡ ಹಳೆ ಬಿದನೂರು ಗ್ರಾಮದ ನಾಗರಾಜ್ ರಾವ್ ಅವರಿಗೆ ಸೇರಿದ ಜಮೀನಿನಲ್ಲಿ ಹೂಳು ಬಾವಿಯಲ್ಲಿ ಸುಮಾರು ಸಾವಿರ ರಾಕೆಟ್ ಗಳು ಪತ್ತೆಯಾದವು. ಈ ರಾಕೆಟ್ ಗಳು ಸದ್ಯದಲ್ಲಿಯೇ ಶಿವಮೊಗ್ಗದ ಶಿವಪ್ಪ ನಾಯಕ ಅರಮನೆಯ ಸಂಗ್ರಹಾಲಯಕ್ಕೆ ಸೇರಲಿವೆ.
2002ರಲ್ಲಿ ಜಮೀನು ಖರೀದಿಸಿದ ನಾಗರಾಜ್ ರಾವ್ ಹೂಳು ಬಿದ್ದ ಬಾವಿಯನ್ನು ಸ್ವಚ್ಛಗೊಳಿಸಲು ಹೊರಟರು. ಆಗ ಕಬ್ಬಿಣದ ಕೆಲವು ಚಿಪ್ಪುಗಳು ಸಿಕ್ಕಿದವು. ಇಲ್ಲಿನ ರೈತರು ಇಂತಹ ಸುಮಾರು 160 ಚಿಪ್ಪುಗಳನ್ನು ಪುರಾತತ್ವ ಇಲಾಖೆಗೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ವಸ್ತುಸಂಗ್ರಹಾಲಯದಲ್ಲಿ ಕೂಡ ಇಂತಹ ಚಿಪ್ಪುಗಳಿವೆ.
Advertisement