ಚಿತ್ರದುರ್ಗ: ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಬಳಿಯಿದ್ದ 1.5 ಲಕ್ಷ ಮೌಲ್ಯದ ಮಾಂಗಲ್ಯ ಸರ ಕಳವು ಮಾಡುವ ಮೂಲಕ ಹಾಡ ಹಗಲೇ ಕಳ್ಳನೊಬ್ಬ ಕೈಚಳಕ ಮೆರೆದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಹಿರಿಯೂರು ತಾಲ್ಲೂಕಿನ ಮೇಟಿಕುರ್ಕೆ ಗ್ರಾಮದ ನಿರ್ಮಲಾ ಮಾಂಗಲ್ಯ ಸರ ಕಳೆದುಕೊಂಡ ನತದೃಷ್ಟೆಯಾಗಿದ್ದಾರೆ. ಹಿರಿಯೂರಿನಿಂದ ರಾಣಿಬೆನ್ನೂರಿಗೆ ಹೊರಟಿದ್ದ ನಿರ್ಮಲಾ ಕೆಎಸ್ಆರ್ ಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು. ಬಸ್ ಚಿತ್ರದುರ್ಗ ನಿಲ್ದಾಣ ತಲುಪಿದಾಗ ಕಳ್ಳನೊಬ್ಬ ಬಸ್ಸಿಗೆ ನುಗ್ಗಿ ಸರವನ್ನು ಅಪಹರಿಸಿ ಪರಾರಿಯಾಗಿದ್ದಾನೆ.
ಬಸ್ ನಿಲ್ದಾಣದಲ್ಲಿದ್ದ ಸಿಸಿಟಿವಿ ಕಾರ್ಯನಿರ್ವಹಿಸುತ್ತಿರಲಿಲ್ಲ, ಮೇಲಾಗಿ ನಿಲ್ದಾಣದಲ್ಲಿದ್ದ ಪೋಲೀಸ್ ಔಟ್ ಪೋಸ್ಟ್ ನಲ್ಲಿ ಸಹ ಆ ಸಮಯಕ್ಕೆ ಪೋಲೀಸರಿರಲಿಲ್ಲ. ಹೀಗಾಗಿ ಕಳ್ಳನಿಗೆ ಕಳವು ಮಾಡಲು ಅನುಕೂಲಕರವಾಗಿತ್ತು.
ಘಟನೆ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.