ಬೆಂಗಳೂರು: ಮೂಲಭೂತ ಸೌಕರ್ಯಗಳ ಕೊರತೆ ಮತ್ತು ಕಡಿಮೆ ದಾಖಲಾತಿಯನ್ನು ಪರಿಗಣಿಸಿ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ(ಎಐಸಿಟಿಇ) ಸುಮಾರು 800 ತಾಂತ್ರಿಕ ಮತ್ತು ನಿರ್ವಹಣಾ ಸಂಸ್ಥೆಗಳನ್ನು ದೇಶಾದ್ಯಂತ ಕೈಬಿಡಲು ನಿರ್ಧರಿಸಿದೆ. ಅವುಗಳಲ್ಲಿ ಆರು ಶಿಕ್ಷಣ ಸಂಸ್ಥೆಗಳು ಕರ್ನಾಟಕದಲ್ಲಿವೆ.
ಬೆಂಗಳೂರು ಮತ್ತು ಕಲಬುರಗಿಯ ತಲಾ ಒಂದೊಂದು ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳನ್ನು ಪ್ರಸಕ್ತ ಸಾಲಿನಿಂದ ಶಾಶ್ವತವಾಗಿ ಮುಚ್ಚಲು ಶಿಫಾರಸು ಮಾಡಲಾಗಿದೆ. ಉಳಿದ ನಾಲ್ಕು ಕಾಲೇಜುಗಳು ನಿರ್ವಹಣೆ ಮತ್ತು ವಿಜ್ಞಾನ ಸಂಸ್ಥೆಗಳಾಗಿದ್ದು ಎಂಬಿಎ ಮತ್ತು ಎಂಸಿಎ ಕೋರ್ಸ್ ಗಳನ್ನು ನೀಡುವ ಕಾಲೇಜುಗಳಾಗಿವೆ. ಕಲಬುರಗಿಯ ಅಪ್ಪಾ ಎಂಜಿನಿಯರಿಂಗ್ ತಾಂತ್ರಿಕ ಸಂಸ್ಥೆ, ಬೆಂಗಳೂರಿನ ನಂದಿ ತಾಂತ್ರಿಕ ಸಂಸ್ಥೆ, ಬೆಂಗಳೂರಿನ ತಾಂತ್ರಿಕ ಮತ್ತು ನಿರ್ವಹಣಾ ಸಂಸ್ಥೆ , ಮೌಂಟ್ ಕಾರ್ಮೆಲ್ ನಿರ್ವಹಣಾ ಸಂಸ್ಥೆ, ಆರ್ ಎಸ್ ನಿರ್ವಹಣಾ ಮತ್ತು ವಿಜ್ಞಾನ ಕಾಲೇಜು ಬೆಂಗಳೂರು ಮತ್ತು ಕೋಲಾರದ ದಾನಮ್ಮ ಚನ್ನಬಸವಯ್ಯ ನಿರ್ವಹಣಾ ವಿಜ್ಞಾನ ಸಂಸ್ಥೆಗಳು ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಮುಚ್ಚಲಿವೆ.
ಕಾಲೇಜುಗಳನ್ನು ಮುಚ್ಚುವಂತೆ ಕಳುಹಿಸಿರುವ ಸಂಸ್ಥೆಗಳಿಗೆ ವಿದ್ಯಾರ್ಥಿಗಳನ್ನು 2018ರ ಶೈಕ್ಷಣಿಕ ವರ್ಷಕ್ಕೆ ದಾಖಲಾತಿ ಮಾಡಿಕೊಳ್ಳಲು ಅವಕಾಶ ನೀಡಿಲ್ಲ. ಈಗಾಗಲೇ ಪ್ರವೇಶ ಪಡೆದು ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ತಮ್ಮ ಪದವಿ ಮುಗಿಯುವವರೆಗೆ ಅವಕಾಶ ನೀಡಲಾಗುತ್ತದೆ.
ಕೆಲವು ಕಾಲೇಜುಗಳು ಸಾಕಷ್ಟು ಸಂಖ್ಯೆಯಲ್ಲಿ ದಾಖಲಾತಿಯಾಗಲಿಲ್ಲವೆಂದು ಸ್ವತಃ ಮುಚ್ಚಲು ಮುಂದಾಗಿವೆ. ಬೆಂಗಳೂರಿನ ಎಂಜಿನಿಯರಿಂಗ್ ಕಾಲೇಜುಗಳಿಗೆ ಮುಚ್ಚಲು ಮನವಿಗಳು ಬಂದಿದ್ದು ನಾವು ಒಪ್ಪಿಕೊಂಡಿದ್ದೇವೆ ಎಂದು ಎಐಸಿಟಿಇ ಅಧಿಕೃತ ಮೂಲಗಳು ತಿಳಿಸಿವೆ.
ದೇಶಾದ್ಯಂತ 800ಕ್ಕೂ ಅಧಿಕ ಮುಚ್ಚಲು ಆಗ್ರಹಿಸಿರುವ ಶಿಕ್ಷಣ ಸಂಸ್ಥೆಗಳಲ್ಲಿ 200 ಎಂಜಿನಿಯರಿಂಗ್ ಕಾಲೇಜುಗಳಾಗಿವೆ. 150 ಕಾಲೇಜುಗಳು ತಮಿಳುನಾಡಿನಲ್ಲಿವೆ. ಇತ್ತೀಚಿನ ನೊಟೀಸ್ ನಿಂದಾಗಿ ಭಾರತದಲ್ಲಿ ಎಂಜಿನಿಯರಿಂಗ್ ಸೀಟುಗಳ ಪ್ರಮಾಣ 80,000ದಷ್ಟು ಇಳಿಯಲಿದೆ.
Advertisement