ಹಾಸನ: ಸರಿ ಸುಮಾರು 20 ವರ್ಷಗಳ ನಂತರ ಹಾಸನ ವಿಮಾನ ನಿಲ್ದಾಣ ಯೋಜನೆಗೆ ರೆಕ್ಕೆಪುಕ್ಕ ಬಂದಿದೆ. ವಿಮಾನ ನಿಲ್ದಾಣಕ್ಕೆ ಹೆಚ್ಚುವರಿ 200 ಎಕರೆ ಭೂಮಿ ನೀಡುವಂತೆ ಕೇಂದ್ರ ವಿಮಾನಯಾನ ಇಲಾಖೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ವಿಮಾನ ನಿಲ್ದಾಣಕ್ಕಾಗಿ ಜಿಲ್ಲಾಡಳಿತ 2007 ರಲ್ಲಿ 536 ಎಕರೆ ಭೂಮಿಯನ್ನು ಸ್ವಾದೀನ ಪಡಿಸಿಕೊಂಡಿತ್ತು.
ಹಾಸನ ವಿಮಾನ ನಿಲ್ದಾಣ ಯೋಜನೆ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಕನಸಿನ ಕೂಸಾಗಿದೆ. ಒಂದೂವರೆ ದಶಕದ ಹಿಂದೆ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಭೂವನಹಳ್ಳಿ ಬಳಿ ಶಂಕು ಸ್ಥಾಪನೆ ನೆರವೇರಿಸಲಾಗಿತ್ತು.
ವಿಮಾನ ನಿಲ್ದಾಣಗಳ ಪ್ರಾಧಿಕಾರದ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ,ಕೆಲವು ತಾಂತ್ರಿಕ ಕಾರಣಗಳನ್ನು ನೀಡಿ ಯೋಜನೆಗೆ ಅನುಮೋದನೆ ನೀಡಲು ನಿರಾಕರಿಸಿತ್ತು.
ನಂತರ ರಾಜ್ಯ ಸರ್ಕಾರವೇ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ನಿರ್ಧರಿಸಿತ್ತು.
2016 ರಲ್ಲಿ ಜಿಲ್ಲಾಧಿಕಾರಿ ಅನ್ಬುಕುಮಾರ್ ಕಂದಾಯ ಅಧಿಕಾರಿಗಳು ಮತ್ತು ಭೂ ಮಾಲೀಕರ ಜೊತೆ ಸಭೆ ನಡೆಸಿ ಹೆಚ್ಚುವರಿ ಭೂಮಿಗೆ ಉತ್ತಮ ಪರಿಹಾರ ನೀಡುವುದಾಗಿ ಘೋಷಿಸಿದ್ದರು, ಜೊತೆಗೆ ಭುವನಹಳ್ಳಿ, ಸಂಕೇನಹಳ್ಳಿ, ಲಕ್ಷ್ಮಿ ಸಾಗರ, ತಿಂಡೆಹಳ್ಳಿ, ದವಲಾಪುರ ಗ್ರಾಮಸ್ಥರಿಗೆ ನೋಟಿಸ್ ನೀಡಲಾಗಿತ್ತು,
ಒಂದು ವೇಳೆ ರಾಜಕಾರಣಿಗಳು ಬದ್ಧತೆ ತೋರಿದ್ದರೇ ದಶಕದ ಹಿಂದೆಯೇ ವಿಮಾನ ನಿಲ್ದಾಣ ಯೋಜನೆ ಸಾಕಾರಗೊಳ್ಳುತ್ತಿತ್ತು. 7 ಗ್ರಾಮಗಳಿಂದ ರಾಜ್ಯ ಸರ್ಕಾರ 536 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿತ್ತು. ಉತ್ತಮ ಪರಿಹಾರ ಹಣ ಹಾಗೂ ವಿಮಾನ ನಿಲ್ದಾಣ ನಿರ್ಮಾಣದ ನಂತರ ಪ್ರತಿ ಮನೆಗೆ ಒಬ್ಬರಿಗೆ ಕೆಲಸ ನೀಡಿದರೇ ತಮ್ಮ ಭೂಮಿ ಕೊಡಲು ರೈತರು ಮುಂದಾಗಿದ್ದರು.
200 ಎಕರೆ ಹೆಚ್ಚುವರಿ ಭೂಮಿ ಸ್ವಾದೀನಕ್ಕೆ ಕ್ರಮ ಕೈಗೊಳ್ಳಲಾಗಿದೆ, ಅಗತ್ಯ ವಿರುವ ಭೂಮಿಯನ್ನು ರಾಜ್ಯ ಸರ್ಕಾರ ನೀಡಿದ ಕೂಡಲೇ ನಿರ್ಮಾಣ ಕೆಲಸ ಆರಂಭಿಸುವುದಾಗಿ ಜ್ಯೂಪಿಟರ್ ಏವಿಯೇಷನ್ ಮುಖ್ಯ ಎಂಜಿನೀಯರ್ ಸಿದ್ದಾರ್ಥ್ ಹೇಳಿದ್ದಾರೆ.