ಮಡಿಕೇರಿ: ನಾಗರಹೊಳೆ ಹುಲಿ ಮೀಸಲು ಅರಣ್ಯದಿಂದ 2 ಕಿಮೀ ದೂರವಿರುವ ವಿರಾಜಪೇಟೆ ತಾಲೂಕಿನ ನಲ್ಕೇರಿ ಗ್ರಾಮದಲ್ಲಿ ಮರಿಯಾನೆ ಸೇರಿ ಮೂರು ಕಾಡಾನೆಗಳ ಶವ ಪತ್ತೆಯಾಗಿದೆ.
35 ವರ್ಷದ ತಾಯಿ ಆನೆ, ಐದು ತಿಂಗಳ ಮರಿ, ಮತ್ತೊಂದು 25 ವರ್ಷದ ಗಂಡು ಆನೆ ಶವ ಪತ್ತೆಯಾಗಿದೆ, ವಿಜಯ್ ಎಂಬುವರಿಗೆ ಸೇರಿದೆ ಕಾಫಿ ಎಸ್ಟೇಟ್ ನಲ್ಲಿರುವ ಕೆರೆಯಲ್ಲಿ ಆನೆಗಳ ಶವ ಪತ್ತೆಯಾಗಿದೆ.
ತಾಯಿ ಆನೆ ಹೊಟ್ಟೆಯ ಒಳಭಾಗದಲ್ಲಿ ಆದ ಗಾಯದಿಂದ ನಿತ್ರಾಣಗೊಂಡು ಸತ್ತಿರಬಹುದು. ತಾಯಿಯಾನೆ ಮರಿಯಾನೆ ಮೇಲೆ ಬಿದ್ದು ಅದೂ ಸಾವನ್ನಪ್ಪಿರುವ ಸಾಧ್ಯತೆಯಿದೆ ಎಂದು ಅರಣ್ಯಾಧಿಕಾರಿಗಳು ಶಂಕಿಸಿದ್ದಾರೆ.
ಹುಣಸೂರು ವನ್ಯಜೀವಿ ವಿಭಾಗದ ವೈದ್ಯಾಧಿಕಾರಿ ಮಜೀದ್ ಖಾನ್ ಆನೆಗಳ ಮರಣೊತ್ತರ ಪರೀಕ್ಷೆ ನಡೆಸಿದರು. ಹೊರಭಾಗದಲ್ಲಿ ಯಾವುದೇ ಗಾಯದ ಗುರುತುಗಳಿಲ್ಲ. ಮರಣೋತ್ತರ ಪರೀಕ್ಷೆಯ ವರದಿಯನ್ನು ಹೈದರಾಬಾದ್ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗುವುದು ಎಂದು ತಿತಿಮತಿ ಎಸಿಎಫ್ ಶ್ರೀಪತಿ ತಿಳಿಸಿದ್ದಾರೆ.
ನಾಗರಹೊಳೆ ಎಸಿಎಫ್ ಪೋಲ್ ಆಂಟೋನಿ, ಆರ್ಎಫ್ಒ ಅರವಿಂದ್ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಳೆದ ವರ್ಷ ಸಿದ್ದಾಪುರ ಸಮೀಪದ ತೋಟದಲ್ಲಿ ವಿದ್ಯುತ್ ತಂತಿಯ ಸ್ಪರ್ಶದಿಂದ ಒಂದೇ ದಿವಸ ನಾಲ್ಕು ಆನೆಗಳು ಸತ್ತಿದ್ದವು. ಕುಶಾಲನಗರ ಸಮೀಪದ ರಂಗಸಮುದ್ರದ ಕಾಫಿ ತೋಟವೊಂದರ ಕೆರೆಯ ಕೆಸರಿನಲ್ಲಿ ಸಿಲುಕಿಕೊಂಡಿದ್ದ ಕಾಡಾನೆಯನ್ನು ಅರಣ್ಯ ಇಲಾಖಾ ಸಿಬ್ಬಂದಿ ಗುರುವಾರ ರಕ್ಷಿಸುವಲ್ಲಿ ಯಶಸ್ವಿಯಾದರು.
ಮೀನುಕೊಲ್ಲಿ ಮೀಸಲು ಅರಣ್ಯ ಪ್ರದೇಶದಿಂದ ಬುಧವಾರ ಸಂಜೆ ಗ್ರಾಮದ ಪರ್ಲಕೋಟಿ ಜಯಪ್ರಕಾಶ್ ಅವರ ತೋಟಕ್ಕೆ ಕಾಡಾನೆಗಳು ದಾಳಿ ಇಟ್ಟಿದ್ದವು. ಈ ವೇಳೆ ಗುಂಪಿನ ಸುಮಾರು 35 ವರ್ಷದ ಹೆಣ್ಣಾನೆ ತೋಟದಲ್ಲಿದ್ದ ಕೆರೆಯ ಕೆಸರಿನಲ್ಲಿ ಸಿಲುಕಿಕೊಂಡಿದೆ. ಜಯಪ್ರಕಾಶ್ ಬೆಳಿಗ್ಗೆ ತೋಟಕ್ಕೆ ತೆರಳಿದಾಗ ಆನೆ ಕೆಸರಿನಲ್ಲಿ ಸಿಲುಕಿರುವುದು ಗೊತ್ತಾಗಿದೆ. ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ.