ಬೆಂಗಳೂರು: ಮುಂದಿನ ವಾರದಲ್ಲಿ ಕರ್ನಾಟಕದ ಅಲ್ಲಲ್ಲಿ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರಿನಲ್ಲಿ ಮೇ 22ರವರೆಗೆ ಗುಡುಗು ಸಹಿತ ಮಳೆ ಸಾಯಂಕಾಲ ಮತ್ತು ರಾತ್ರಿ ವೇಳೆ ಬೀಳಲಿದೆ. ಮಳೆಯಿಂದಾಗಿ ಆದ್ರತೆ ಮಟ್ಟ ಹೆಚ್ಚಾಗಿ ಗರಿಷ್ಠ ಉಷ್ಣಾಂಶ ಕಡಿಮೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ತಿಳಿಸಿದೆ.
ರಾಜ್ಯದ ದಕ್ಷಿಣ ಒಳನಾಡಿನ ಭಾಗಗಳಾದ ಬೆಂಗಳೂರು ಗ್ರಾಮಾಂತರ, ಬೆಂಗಳೂರು, ಬಳ್ಳಾರಿ, ಚಿಕ್ಕಮಗಳೂರು, ಚಿತ್ರದುರ್ಗ, ಕೊಡಗು, ಹಾಸನ, ಕೋಲಾರ, ಮೈಸೂರು, ಮಂಡ್ಯ, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಇಂದಿನಿಂದ ಮಳೆ ಬೀಳುವ ಸಾಧ್ಯತೆಯಿದೆ. ಉತ್ತರ ಕರ್ನಾಟಕ ಒಳನಾಡು ಭಾಗಗಳಲ್ಲಿ ಬೆಳಗಾವಿ, ಬೀದರ್, ವಿಜಯಪುರ, ಧಾರವಾಡ, ಕಲಬುರಗಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಮಳೆಯಾಗಲಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣೆ ಕೇಂದ್ರದ ವಿಜ್ಞಾನಿ ಎಸ್ ಎಸ್ ಎಂ ಗಾವಸ್ಕರ್ ಮಾತನಾಡಿ, ಗಾಳಿಯ ನಿರುಪಯುಕ್ತತೆಯಿಂದ ಹಲವಾರು ಭಾಗಗಳಲ್ಲಿ ಮಳೆ ಬಿದ್ದಿದೆ. ಮಳೆಯಿಂದಾಗಿ ಕಳೆದ ಕೆಲ ದಿನಗಳಲ್ಲಿ ಬೆಂಗಳೂರಿನಲ್ಲಿ 30 ಡಿಗ್ರಿಯಷ್ಟು ಉಷ್ಣಾಂಶ ದಾಖಲಾಗಿದೆ.
ಈ ವರ್ಷ ಬೆಂಗಳೂರಿನಲ್ಲಿ ಪೂರ್ವ ಮುಂಗಾರು ಮಳೆ ಅಧಿಕವಾಗಿದೆ. ಮೇ 1ರಿಂದ 18ರವರೆಗೆ ಸಾಮಾನ್ಯವಾಗಿ ಪ್ರತಿವರ್ಷ ಸರಾಸರಿ 53 ಮಿಲಿ ಮೀಟರ್ ಮಳೆ ಬಿದ್ದರೆ ಈ ವರ್ಷ 83 ಮಿಲಿ ಮೀಟರ್ ಮಳೆಯಾಗಿದೆ. ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಸರಾಸರಿಗಿಂತ ಎರಡು ಪಟ್ಟು ಅಧಿಕ ಮಳೆ ಸುರಿದಿದೆ.
Advertisement