ವಿಧಾನಸೌಧದಲ್ಲಿ ಟಿಪ್ಪು ಜಯಂತಿ ಆಚರಣೆ: ಡಾ ಜಿ ಪರಮೇಶ್ವರ್
ಬೆಂಗಳೂರು: ಈ ವರ್ಷ ಟಿಪ್ಪು ಜಯಂತಿಯನ್ನು ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಆಚರಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಈ ಕುರಿತು ಸುದ್ದಿಗಾರರ ಜೊತೆ ಮಾಡಿದ ಗೃಹ ಸಚಿವ ಡಾ ಜಿ ಪರಮೇಶ್ವರ್, ಟಿಪ್ಪು ಜಯಂತಿ ಆಚರಣೆ ಸ್ಥಳದ ವಿಚಾರದಲ್ಲಿ ಗೊಂದಲ ಇದೆ. ಕಳೆದ ಮೂರು ವರ್ಷದಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿಯೇ ಆಚರಿಸಲಾಗುತ್ತಿದೆ. ಸಿದ್ದರಾಮಯ್ಯ ಅವರ ಬಳಿ ಇದೆ ವಿಚಾರ ಮಾತನಾಡಿದ್ದೇನೆ. ಅವರು ವಿಧಾನಸೌಧದದಲ್ಲಿಯೇ ಮಾಡುವಂತೆ ಹೇಳಿದ್ದಾರೆ ಎಂದು ತಿಳಿಸಿದರು.
ಭದ್ರತೆ ಮತ್ತು ಹೆಚ್ಚು ಜನ ಸೇರಲು ಸಾಧ್ಯವಾಗುವುದಿಲ್ಲ ಎಂಬ ದೃಷ್ಟಿಯಿಂದ ಟಿಪ್ಪು ಜಯಂತಿಯನ್ನು ರವೀಂದ್ರ ಕಲಾಕ್ಷೇತ್ರಕ್ಕೆ ವರ್ಗಾಯಿಸಿರುವುದಾಗಿ ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದರು. ಈ ಬೆನ್ನಲ್ಲೇ ಪರಮೇಶ್ವರ್ ಅವರನ್ನು ಸಮನ್ವಯ ಸಮಿತಿ ಅಧ್ಯಕ್ಷ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಬಳಿ ಕರೆದುಕೊಂಡು ಹೋಗಿದ್ದ ವಕ್ಫ್ ಸಚಿವ ಜಮೀರ್ ಅಹ್ಮದ್ ಅವರು ವಿಧಾನಸೌಧದಲ್ಲೇ ಆಚರಣೆ ಮಾಡಿಸಲು ಒಪ್ಪಿಸಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಜಯಮಾಲಾರೊಂದಿಗೆ ಸೇರಿ ಮುಖ್ಯಮಂತ್ರಿ ಕುಮಾರಸ್ವಾಮಿಯನ್ನೂ ಭೇಟಿ ಮಾಡಿ ಮನವಿ ಮಾಡಿದ್ದೇವೆ. ಟಿಪ್ಪು ಜಯಂತಿ ಆಚರಿಸಲು ವಿಧಾನಸೌಧವೇ ಸುರಕ್ಷಿತ ಪ್ರದೇಶವಾಗಿದೆ. ಬಿಜೆಪಿಯವರು ರಾಜಕೀಯಕ್ಕಾಗಿ ಪ್ರತಿಭಟನೆ ಮಾಡುತ್ತಾರೆ. ಇದರಲ್ಲಿ ರಾಜಕೀಯ ಮಾಡುವುದು ಬೇಡ. ಟಿಪ್ಪು ಜಯಂತಿ ಆಚರಣೆಗೆ ಬಿಜೆಪಿಯವರೂ ಸರ್ಕಾರದ ಜೊತೆ ಕೈ ಜೋಡಿಸಲಿ ಎಂದು ಮನವಿ ಮಾಡಿಕೊಂಡರು.