ಬೆಂಗಳೂರು: ಗ್ಯಾಂಗ್ ವಾರ್ ನಲ್ಲಿ ಇಬ್ಬರು ರೌಡಿಗಳ ಬರ್ಬರ ಹತ್ಯೆ
ಬೆಂಗಳೂರು: ಹಳೇ ದ್ವೇಷದ ಹಿನ್ನೆಲೆಯಲ್ಲಿ ನಡೆದ ಗ್ಯಾಂಗ್ ವಾರ್ ನಲ್ಲಿ ಇಬ್ಬರು ರೌಡಿಗಳು ಬರ್ಬರವಾಗಿ ಹತ್ಯೆಯಾಗಿರುವ ಘಟನೆ ಬನ್ನೇರುಘಟ್ಟ ರಸ್ತೆಯ ವೀವರ್ಸ್ ಕಾಲೋನಿಯಲ್ಲಿ ಬುಧವಾರ ನಡೆದಿದೆ.
ಪೊಲೀಸರ ಮೇಲೆ ದಾಳಿ ನಡೆಸಿದ ಪ್ರಮುಖ ಆರೋಪಿಯ ಎರಡು ಕಾಲುಗಳಿಗೆ ಗುಂಡು ಹಾರಿಸಲಾಗಿದ್ದು, 11 ಮಂದಿ ಆರೋಪಿಗಳು ಪೊಲೀಸರಿಗೆ ಶರಣಾಗಿದ್ದಾರೆ.
ಮುರುಗಾ (34) ಹಾಗೂ ಪಳನಿ (30) ಹತ್ಯೆಗೀಡಾದ ರೌಡಿಗಳು. ವೀವರ್ಸ್ ಕಾಲೋನಿ ನಿವಾಸಿಗಳಾದ ಇವರ ಮೇಲೆ ಹುಳಿಮಾವು ಹಾಗೂ ಅತ್ತಿಬೆಲೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಮಧ್ಯೆ ಮುರುಗಾ ಕೊಲೆಯತ್ನ ಪ್ರಕರಣದಲ್ಲಿ ಆರೋಪಿಯಾಗಿದ್ದ.
ಪ್ರಮುಖ ಆರೋಪಿ ಬಿಟಿಎಸ್ ಮಂಜ (28) ಕೊಣನಕುಂಟೆಯ ರೌಡಿಯಾಗಿದ್ದು, ನಿನ್ನೆ ಬನ್ನೇರುಘಟ್ಟ ರಸ್ತೆಯ ನೈಸ್ ರಸ್ತೆಯ ಅಂಜನಪುರ ಬಸ್ ನಿಲ್ದಾಣದಲ್ಲಿ ಪೊಲೀಸರು ಗುಂಡು ಹಾರಿಸಿದ್ದರು. ದಾಳಿ ವೇಳೆಯಲ್ಲಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಸುಬ್ರಮಣಿ ತೀವ್ರವಾಗಿ ಗಾಯಗೊಂಡಿದ್ದಾರೆ.
ಮುರುಗಾ ಮತ್ತು ಪಳನಿ ತನ್ನಿಬ್ಬರು ಬೆಂಬಲಿಗರೊಂದಿಗೆ ವೀವರ್ಸ್ ಕಾಲೋನಿಯ ಚೈತ್ರೇಶ್ವರ್ ಬಾರ್ ಮತ್ತು ರೆಸ್ಟೋರೆಂಟ್ ನಲ್ಲಿರುವಾಗ ಬುಧವಾರ ರಾತ್ರಿ 10-30 ರ ಸುಮಾರಿನಲ್ಲಿ ಎರಗಿದ 12 ಮಂದಿ ಹಂತಕರ ಪಡೆ ದಾಳಿ ನಡೆಸಿ ಹತ್ಯೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ .
ತಮಿಳುನಾಡಿಗೆ ಹೋಗಲು ಅಂಜನಪುರ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತದ್ದ ಮಂಜನನ್ನು ಹಿಡಿಯಲು ಪೊಲೀಸರು ಪ್ರಯತ್ನಿಸಿದ್ದಾರೆಯ ಆದರೆ, ಆತ ಕಾನ್ಸ್ ಟೇಬಲ್ ಮೇಲೆ ಖಾರದ ಪುಡಿ ಎರಚಿ ಪಿಎಸ್ ಐ ಸುಬ್ರಮಣಿ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಈ ವೇಳೆ ಎಸಿಪಿ ಹಾಗೂ ಪಿಎಸ್ ಐ ಮೂರು ಸುತ್ತು ಗುಂಡು ಹಾರಿಸಿದ್ದಾರೆ. ಇತರ 11 ಮಂದಿ ಆರೋಪಿಗಳು ಕೋಣನಕುಂಟೆ ಪೊಲೀಸರ ಮುಂದೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
7 ವರ್ಷದ ಹಳೆಯ ದ್ವೇಷ
ಮಂಜ ವೀವರ್ಸ್ ಕಾಲೋನಿಯಲ್ಲಿ ಹುಟ್ಟಿ ಬೆಳೆದಿದ್ದರೆ, ತಮಿಳುನಾಡಿನಿಂದ ಬಂದಿದ್ದ ಮುರುಗಾ 15 ವರ್ಷದಿಂದಲೂ ಅಲ್ಲಿಯೇ ವಾಸಿಸುತ್ತಿದ್ದ. ಆತ ತನ್ನದೇ ಆದ ಗ್ಯಾಂಗ್ ಕಟ್ಟಿಕೊಂಡಿದ್ದ. 2011ರಲ್ಲಿ ಗ್ಯಾಂಬ್ಲಿಗ್ ವಿಚಾರವಾಗಿ ಇಬ್ಬರ ನಡುವೆ ಮೊದಲ ಬಾರಿಗೆ ಇಬ್ಬರ ನಡುವೆ ವಾಗ್ವಾದ ನಡೆದಿತ್ತು.
ಮುರುಗಾನನ್ನು ಕೊಲೆ ಮಾಡಲೆಂದ ನಿರ್ಧರಿಸಿ ಆತನ ಮನೆಗೆ ಮಂಜ ಹೋಗಿದ್ದ. ಆದರೆ, ಅಲ್ಲಿ ಆತ ಇರಲಿಲ್ಲ. ಆದರಿಂದ ಮುರುಗಾನ ಸಹೋದರ ಅಯ್ಯನಾರ್ ಮೇಲೆ ಮಂಜ ದಾಳಿ ನಡೆಸಿದ್ದರಿಂದ ಆತ ಎರಡು ತಿಂಗಳು ಕೋಮಾದಲ್ಲಿದ್ದ. ನಂತರ 2012ರಲ್ಲಿ ಮಂಜನನ್ನು ಬಂಧಿಸಲಾಗಿತ್ತು ಎಂದು ಪೊಲೀಸ್ ಮೂಲಗಳು ಹೇಳಿವೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ