ಬೆಂಗಳೂರು: ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನಲ್ಲಿ ನಡೆದ ಭೀಕರ ಬಸ್ ಅಪಘಾತದ ಹಿನ್ನಲೆಯಲ್ಲಿ ಸ್ಥಳೀಯ ಸಾರಿಗೆ ಇಲಾಖೆ ಅಧಿಕಾರಿಗಳು ವಾಹನದ ದಾಖಲೆಯನ್ನು ಪರಿಶೀಲಿಸಿದಾಗ ಸೂಕ್ತ ದಾಖಲೆಗಳನ್ನು ಹೊಂದಿದೆ. ಅಪಘಾತಕ್ಕೆ ಚಾಲಕನ ನಿರ್ಲಕ್ಷ್ಯತನವೇ ಕಾರಣ ಎಂದು ತಿಳಿದುಬಂದಿದೆ.
ಬಸ್ಸನ್ನು ಮಂಗಳೂರು ಆರ್ ಟಿಒ ವಿಭಾಗದಿಂದ ಮಂಡ್ಯ ಆರ್ ಟಿಒ ವಿಭಾಗಕ್ಕೆ 2015ರ ಏಪ್ರಿಲ್ 1ರಂದು ವರ್ಗಾಯಿಸಿದ ದಾಖಲೆಗಳಿವೆ.
ಮಂಡ್ಯ ಆರ್ ಟಿಒ ಕಚೇರಿಯ ಅಧಿಕಾರಿ ಬಂಡೀಗೌಡ ಲೇ ಔಟ್ ನಿವಾಸಿ ಶ್ರೀನಿವಾಸ್ ಬಸ್ಸಿನ ಈಗಿನ ಮಾಲೀಕರಾಗಿದ್ದಾರೆ. 2001ರಲ್ಲಿ ಬಸ್ಸಿನ ಮೂಲ ದಾಖಲೆಯಾಗಿತ್ತು. ಅದು ಮಂಗಳೂರು ಆರ್ ಟಿಒ ಕಚೇರಿಯಲ್ಲಿ, ಮಂಗಳೂರಿನಲ್ಲಿ 14 ವರ್ಷಗಳ ಕಾಲ ಈ ಬಸ್ಸು ಓಡಾಟ ನಡೆಸಿದೆ. ಮೂರು ವರ್ಷಗಳ ಹಿಂದೆ ಮಂಡ್ಯ ಮತ್ತು ಪಾಂಡವಪುರದಲ್ಲಿ ಓಡಾಟ ಆರಂಭಿಸಿತ್ತು.
ವೈರುಧ್ಯವೆಂದರೆ 2019ರ ಮೇ 15ರವರೆಗೆ ವಾಹನದ ಫಿಟ್ ನೆಸ್ ಸರ್ಟಿಫಿಕೇಟ್ ಅವಧಿ ಹೊಂದಿದ್ದು ಈ ತಿಂಗಳ ತೆರಿಗೆಯನ್ನು ಕೂಡ ಪಾವತಿಸಲಾಗಿದೆ. ಬಸ್ಸಿಗೆ ಮೇ 15, 2019ರವರೆಗೆ ವಿಮೆ ಕೂಡ ಮಾಡಿಸಲಾಗಿದೆ. ಬಸ್ಸಿನ ಎಲ್ಲಾ ದಾಖಲೆಗಳಿದ್ದು ಚಾಲಕನ ನಿರ್ಲಕ್ಷತನದಿಂದಲೇ ಅಪಘಾತ ನಡೆದಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ಈ ಬಗ್ಗೆ ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಮಾತನಾಡಿ, 18 ವರ್ಷಗಳ ಹಿಂದಿನ ದಾಖಲಾತಿ ಹೊಂದಿದ್ದರೂ ಕೂಡ ಬಸ್ಸಿನ ಮಾಲೀಕರು ವಾರ್ಷಿಕವಾಗಿ ಫಿಟ್ ನೆಸ್ ಸರ್ಟಿಫಿಕೇಟನ್ನು ನವೀಕರಣ ಮಾಡಿಸಿಕೊಂಡಿದ್ದಾರೆ. ಮಂಗಳೂರಿನಿಂದ ಬಸ್ಸು ಮಂಡ್ಯಕ್ಕೆ ವರ್ಗಾವಣೆಗೊಂಡ ನಂತರ ಬಸ್ಸನ್ನು ಚಲಾಯಿಸಲು ಅನುಮತಿಗಾಗಿ ಮಾಲೀಕರು ಮತ್ತೊಬ್ಬರ ಜೊತೆ ಲೀಸ್ ಒಪ್ಪಂದ ಮಾಡಿಕೊಂಡಿದ್ದರು. 5 ವರ್ಷಗಳ ಅವಧಿಗೆ ಅನುಮತಿಯನ್ನು ನವೀಕರಣ ಮಾಡಿದ್ದು ರಸ್ತೆಗಳಲ್ಲಿ ಚಲಾಯಿಸಲು ದಾಖಲೆಗಳನ್ನು ಹೊಂದಿತ್ತು ಎನ್ನುತ್ತಾರೆ.
Advertisement