ಬೆಳಗಾವಿ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ನಲ್ಲಿ ಉಗ್ರರು ಮತ್ತೆ ಬಾಲ ಬಿಚ್ಚಿದ್ದು, ಸೋಮವಾರ ರಾತ್ರಿ ಪಹರೆ ಕಾಯುತ್ತಿದ್ದ ಸಿಆರ್ ಪಿಎಫ್ ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಬೆಳಗಾವಿಯ ಚಿಕ್ಕೋಡಿ ತಾಲೂಕಿನ ಯೋಧರೊಬ್ಬರು ಹುತಾತ್ಮರಾಗಿದ್ದಾರೆ.
ಕುಲ್ಗಾಮ್ ನ ಮನೆಯೊಂದರಲ್ಲಿ ಅಡಗಿ ಕುಳಿತಿದ್ದ ಉಗ್ರರು ಯೋಧರ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದು, ದಾಳಿಯಲ್ಲಿ ಚಿಕ್ಕೋಡಿಯ ಬೂದಿಹಾಳದ ಯೋಧ ಪ್ರಕಾಶ ಜಾಧವ್(29) ಹುತಾತ್ಮಗಿದ್ದಾರೆ. ಅವರು 2007ರಲ್ಲಿ ಸಿಆರ್ಪಿಎಫ್ ಸೇರ್ಪಡೆಯಾಗಿದ್ದರು.
ಜಾಧವ್ ಅವರು ಪತ್ನಿ ರಾಣಿ ಮತ್ತು ಮೂರು ತಿಂಗಳ ಹೆಣ್ಣು ಮಗುವನ್ನು ಅಗಲಿದ್ದಾರೆ ಎಂದು ತಿಳಿದು ಬಂದಿದೆ.
ನಾಳೆ ಪ್ರಕಾಶ್ ಜಾಧವ್ ಅವರ ಪಾರ್ಥೀವ ಶರೀರವನ್ನು ಬೂದಿಹಾಳಕ್ಕೆ ತರಲಾಗುತ್ತಿದ್ದು ಮಧ್ಯಾಹ್ನ ಅಂತ್ಯಕ್ರಿಯೆ ನಡೆಯುವ ಸಾಧ್ಯತೆಗಳಿವೆ.
ಯೋಧರು ಸಹ ಪ್ರತಿದಾಳಿ ನಡೆಸಿ ಮೂವರು ಉಗ್ರರನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದ್ದಾರೆ.