ಮೈಸೂರು: "ನಮ್ಮ ಕುಟುಂಬದವ್ರು ಒಳ್ಳೇಯವ್ರು, ನಮಗೆ ಇಷ್ಟವಾಗುವ ಹಾಗೇ ಇದ್ದರು. ಆದರೆ ನಾವೇ ಅರ್ಥ ಮಾಡಿಕೊಂಡಿಲ್ಲ, ಸಾಯುತ್ತಿದ್ದೇವೆ" - ಹೀಗೊಂದು ಡೆತ್ ನೋಟ್ ಬರೆದು ಪ್ರೇಮಿಗಳಿಬ್ಬರೂ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ಪಿರಿಯಾಪಟ್ಟಣದಲ್ಲಿ ನಡೆದಿದೆ.
ಪಿರಿಯಾಪಟ್ಟಣ ತಾಲೂಕು ಸಿಡಿಲು ಮಲ್ಲಿಕಾರ್ಜುನ ಬೆಟ್ಟದಲ್ಲಿ ಒಂದೇ ಮರಕ್ಕೆ ಪ್ರೇಮಿಗಳಿಬ್ಬರೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಾಗೇನಹಳ್ಳಿ ದೊಡ್ಡಗೌಡನಕೊಪ್ಪಲು ಗ್ರಾಮದ ಡಿ.ಎಲ್.ವೀಣಾ ಹಾಗೂ ಕೆಳಗನಹಳ್ಳಿ ದೊಡ್ಡಕೊಪ್ಪಲು ನಿವಾಸಿ ಕೆ.ಎನ್.ಸ್ವಾಮಿ ನೇಣುಇಗೆ ಶರಣಾದ ಪ್ರೇಮಿಗಳು.
ವೀಣಾ ಹಾಗೂ ಸ್ವಾಮಿ ಬೆಟ್ಟದ ವೀರಭದ್ರನಗುಡಿ ಸಮೀಪ ಮರಕ್ಕೆ ನೇಣು ಹಾಕಿಕೊಂಡಿದ್ದು ವೃತ್ತ ಪೊಲೀಸ್ ಅಧಿಕಾರಿಯೊಬ್ಬರು ಬೆಟ್ಟದ ದೇವಸ್ಥಾನದ ಬಳಿ ಹೋಗಿದ್ದ ಸಂದರ್ಭ ಪ್ರಕರಣ ಬೆಳಕು ಕಂಡಿದೆ.
ಇಬ್ಬರದೂ ಒಂದೇ ಡೆತ್ ನೋಟ್!
ವೀಣಾ ಮತ್ತು ಸ್ವಾಮಿ ಇಬ್ಬರೂ ಒಂದೇ ಕಾಗದದಲ್ಲಿ ಡೆತ್ ನೋಟ್ ಬರೆದಿಟ್ಟು ಸಾವನ್ನಪ್ಪಿದ್ದಾರೆ.ಕೆಂಪು ಇಂಕ್ ನಲ್ಲಿರುವ ಡೆತ್ ನೋಟ್ ನಲ್ಲಿ ವೀಣಾ ಹಾಗೂ ಸ್ವಾಮಿ ಇಬ್ಬರೂ ತಮ್ಮ ಕುಟುಂಬ, ಹಾಗೂ ಪೋಷಕರನ್ನು ನೆನೆದಿದ್ದಾರೆ. ಅಲ್ಲದೆ ಇಬ್ಬರೂ ಸತ್ತ ಮೇಲೆ ಇಬ್ಬರನ್ನು ಒಟ್ಟಾಗಿ ಕೆ.ಎಸ್. ಸ್ವಾಮಿ ಊರಲ್ಲಿಯೇ ಸುಡಬೇಕು ಎಂದೂ ಬರೆದಿರುವುದು ಕಂಡುಬಂದಿದೆ.
"ನಮ್ಮ ಸಾವಿನ ಕುರಿತು ಚಿಂತಿಸಬೇಡಿ, ಎರಡೂ ಕುಟುಂಬದವರೂ ಒಳ್ಳೆಯವರು, ನಮ್ಮ ಇಷ್ಟದಂತೇ ಇದ್ದರು. ಆದರೆ ನಾವೇ ಅರ್ಥ ಮಾಡಿಒಂಡಿಲ್ಲ, ಸಾಯುತ್ತಿದ್ದೇವೆ." ಎಂದು ಬರೆದು ಇಬ್ಬರೂ ಸಹಿ ಮಾಡಿದ್ದಾರೆ.
ಮೃತ ಯುವತಿಯ ತಂದೆ ಕಾಲೇಜಿಗೆ ಹೋಗಿ ಬರೋದಾಗಿ ಹೇಳಿ ಹೋಗಿದ್ದಾಗ ದೂರವಾಣಿ ಮೂಲಕ ಮಗಳ ಸಾವಿನ ಸುದ್ದಿ ಸಿಕ್ಕಿದೆ, ಇನ್ನು ಮೃತ ಸ್ವಾಮಿ ಸಹ ಅವರದೇ ಕುಟುಂಬದ ಸಂಬಂಧಿಯಾಗಿದ್ದನೆನ್ನುವುದು ತಿಳಿದಿದ್ದು ಅವರಿಬ್ಬರೂ ಪ್ರೇಮಿಸುತ್ತಿದ್ದ ಬಗ್ಗೆ ಎರಡೂ ಕುಟುಂಬಗಳಿಗೆ ತಿಳಿದಿರಲಿಲ್ಲ ಎಂದು ಪೋಲೀಸ್ ದೂರಿನಲ್ಲಿ ವಿವರಿಸಲಾಗಿದೆ.
ವೀಣಾ ಬೆಟ್ಟದಪುರದ ಪಿಯು ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದರೆ ಸ್ವಾಮಿ ಪಶುಸಂಗೋಪನೆ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ. ಇಬ್ಬರೂ ಹತ್ತಿರದ ಸಂಬಂಧಿಗಳಾಗಿದ್ದು ಪ್ರೀತಿಸುತ್ತಿದ್ದದ್ದು ಮಾತ್ರ ಕುಟುಂಬದ ಯಾರಿಗೂ ತಿಳಿದಿಲ್ಲ ಎನ್ನಲಾಗಿದೆ. ಈಗ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿರುವುದು ಎರಡೂ ಕುಟುಂಬದ ಆಘಾತಕ್ಕೆ ಕಾರಣವಾಗಿದೆ.
ಬೆಟ್ಟದಪುರ ಪೋಲೀಸರು ಪ್ರಕರಣ ದಾಖಲಿಸಿಕೊಂಡು ಶವವನ್ನು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ವಾರಸುದಾರರಿಗೆ ಒಪ್ಪಿಸಿದ್ದಾರೆ.