ಬೆಂಗಳೂರು: ನೈರುತ್ಯ ಮತ್ತು ಈಶಾನ್ಯ ಮುಂಗಾರು ಕೊರತೆ ಕಂಡಿದ್ದ ಕರ್ನಾಟಕ ರಾಜ್ಯದಲ್ಲಿ ಹಲವು ಜಲಾಶಯಗಳಲ್ಲಿ ನೀರಿನ ಮಟ್ಟ ತಳಮಟ್ಟಕ್ಕಿಂತ ಕಡಿಮೆಗೆ ಬಂದಿದೆ.
ಇದರಿಂದ ಮುಂದಿನ ಬೇಸಿಗೆಯಲ್ಲಿ ಮಳೆಯ ತೀವ್ರ ಕೊರತೆಯುಂಟಾಗುವ ಸಾಧ್ಯತೆಯಿದ್ದು ಬೆಂಗಳೂರಿನಂತಹ ನಗರಗಳಲ್ಲಿ ಕುಡಿಯುವ ನೀರಿಗೆ ಸಹ ಸಮಸ್ಯೆಯುಂಟಾಗಬಹುದು ಎನ್ನಲಾಗುತ್ತಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ಪ್ರಕಾರ, ನೈರುತ್ಯ ಮುಂಗಾರು ಈ ವರ್ಷ ರಾಜ್ಯದಲ್ಲಿ ಶೇಕಡಾ 20ರಿಂದ ಶೇಕಡಾ 50ರಷ್ಟು ಕಡಿಮೆಯಾಗಿದೆ. ಆದರೆ ದಕ್ಷಿಣ ಒಳನಾಡುಗಳಾದ ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ಮಲೆನಾಡು ಪ್ರದೇಶಗಳಲ್ಲಿ ಸರಾಸರಿ ಮಳೆಯಾಗಿರುವುದು ಕೊಂಚ ಸಮಾಧಾನಕರ ಸಂಗತಿ. ಈಶಾನ್ಯ ಮುಂಗಾರು ಈ ವರ್ಷ ಅತ್ಯಂತ ಕಡಿಮೆ ಬಿದ್ದಿದೆ ಎನ್ನಲಾಗಿದೆ.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕೃಷಿ ಹವಾಮಾನ ತಜ್ಞ ಪ್ರೊ ಎಂ ಬಿ ರಾಜೇಗೌಡ, ನೈರುತ್ಯ ಮುಂಗಾರು ಕೊರತೆ ಕಂಡುಬಂದರೆ ಈಶಾನ್ಯ ಮುಂಗಾರು ಹೆಚ್ಚಾಗಿರುತ್ತದೆ. ಆದರೆ ಈ ವರ್ಷ ಎರಡೂ ಮುಂಗಾರು ಕಡಿಮೆಯಾಗಿದೆ ಎಂದರು.
ಈಶಾನ್ಯ ಮುಂಗಾರು ಕೊರತೆಯಿಂದ ಮೆಕ್ಕೆಜೋಳ, ಸೂರ್ಯಕಾಂತಿ, ಬಟಾಣಿ, ಹೆಸರು ಬೇಳೆ, ಹುರುಳಿ ಕಾಳು, ಸಾಸಿವೆ ಇತ್ಯಾದಿ ಬೆಳೆಗಳ ಮೇಲೆ ಪರಿಣಾಮ ಬೀರಲಿದೆ. ನವೆಂಬರ್ ಕೊನೆಯಾಗಿದೆ , ಈ ಸಮಯದಲ್ಲಿ ಬಿತ್ತನೆ ಮಾಡಿ ಬೆಳೆಯಲು ಸಮಯ ತಡವಾಗಿದೆ. ಡಿಸೆಂಬರ್ ನಲ್ಲಿ ಮೋಡ ತುಂಬಿ ಮಳೆಯಾದರೂ ಕೂಡ ರೈತರಿಗೆ ಉಪಯೋಗವಾಗುವುದಿಲ್ಲ ಎನ್ನುತ್ತಾರೆ.
Advertisement