ಕರ್ನಾಟಕ ಒಂದು ರಾಜ್ಯವಾಗಿ ಒಗ್ಗಟ್ಟಿನಿಂದಿದೆ, ಅದನ್ನು ಒಡೆಯಬೇಡಿ: ಸಿಎಂ ಕುಮಾರಸ್ವಾಮಿ ಮನವಿ

63ನೇ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ಪ್ರಾದೇಶಿಕ ಒಗ್ಗಟ್ಟಿನ ಬಗ್ಗೆ ಮಾತನಾಡಿದರು, ...
ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸಿಎಂ
ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸಿಎಂ
ಬೆಂಗಳೂರು: 63ನೇ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ಪ್ರಾದೇಶಿಕ ಒಗ್ಗಟ್ಟಿನ ಬಗ್ಗೆ ಮಾತನಾಡಿದರು,  ನಮ್ಮ ಸರ್ಕಾರ ನಾಡಿನ ಎಲ್ಲಾ ಪ್ರಾಂತ್ಯಗಳನ್ನು ಸಮಾನವಾಗಿ ಗೌರವಿಸುತ್ತದೆ ಅನುಮಾನ ಬೇಡ ಎಂದು ಹೇಳಿದರು.
ರವೀಂದ್ರ ಕಲಾ ಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗುರುವಾರ ಆಯೋಜಿಸಿದ್ದ 2018ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು ಸರ್ಕಾರದ ಬಗ್ಗೆ ಯಾರೂ ಸಂಶಯ ವ್ಯಕ್ತಪಡಿಸಬೇಡಿ, ಬದಲಿಗೆ ಸಹಕಾರ ನೀಡಿ. ಸರ್ಕಾರ ಕೇವಲ ಹಳೇ ಮೈಸೂರು ಪ್ರಾಂತ್ಯಕ್ಕೆ ಮಾತ್ರ ಒತ್ತು ನೀಡಿದೆ ಎಂದು ಕೆಲವರು ಸಂಶಯ ವ್ಯಕ್ತಪಡಿಸುತ್ತಿದ್ದಾರೆ. 
ಕೆಲವು ವರ್ಗಗಳಲ್ಲಿ ಈ ಬಗ್ಗೆ ಅನುಮಾನ ಮತ್ತು ಅಸೂಯೆಗಳು ಕಾಡುತ್ತಿವೆ. ಆದರೆ, ನಮ್ಮ ಸರಕಾರ ಯಾವುದೇ ಒಂದು ಪ್ರಾಂತ್ಯ ಅಥವಾ ಜಿಲ್ಲೆಗೆ ಸೀಮಿತವಾಗಿಲ್ಲ ಎಂದು ಸ್ಪಷ್ಟ ಪಡಿಸಿದರು,
ನಾನು ಯಾವತ್ತೂ ಹಳೇ ಕರ್ನಾಟಕ, ಮಧ್ಯ ಕರ್ನಾಟಕ, ಬಾಂಬೆ ಕರ್ನಾಟಕ, ಹೈದ್ರಾಬಾದ್‌ ಕರ್ನಾಟಕ ಎಂದು ತಾರತಮ್ಯದಿಂದ ನೋಡಿಲ್ಲ. ನನಗೆ ಇಡೀ ಕರ್ನಾಟಕವೇ ಒಂದು ಕುಟುಂಬವಿದ್ದಂತೆ. 
ಪ್ರಾದೇಶಿಕವಾಗಿ ಹರಿದು ಹಂಚಿ ಹೋಗಿದ್ದ ರಾಜ್ಯವನ್ನು ನಮ್ಮ ಹಿರಿಯರು ಹೋರಾಡಿ ಏಕೀಕರಣಗೊಳಿಸಿದ್ದಾರೆ. ಕರ್ನಾಟಕವನ್ನು ಹೊರತುಪಡಿಸಿ ದೇಶದಲ್ಲಿ ಯಾವುದೇ ರಾಜ್ಯದಲ್ಲಿ ರಾಜ್ಯೋತ್ಸವ ಆಚರಣೆ ಮಾಡುವುದಿಲ್ಲ. ಜತೆಗೆ ಬೇರೆ ಯಾವುದೇ ರಾಜ್ಯ ಪ್ರತ್ಯೇಕ ನಾಡಗೀತೆಯನ್ನು ಸಹ ಹೊಂದಿಲ್ಲ. ಸರ್ಕಾರದ ಎಲ್ಲಾ ಕಾರ್ಯಕ್ರಮಗಳಲ್ಲು ಹಾಡುವ ಮೂಲಕ ನಾಡಗೀತೆಯನ್ನು ಗೌರವಿಸುವ ದೇಶದ ಪ್ರಥಮ ರಾಜ್ಯ ಕರ್ನಾಟಕವಾಗಿದೆ ಎಂದರು.
ಮಾಧ್ಯಮಗಳು ಸತ್ಯಾಂಶ ಹಾಗೂ ವಾಸ್ತವಾಂಶಗಳನ್ನು ಬರೆಯಬೇಕು. ಮತ್ತು ಬಿತ್ತರಿಸಬೇಕು. ತಪ್ಪು ಮಾಡಿದಾಗ ಅದನ್ನು ಜನರಿಗೆ ಎತ್ತಿ ತೋರಿಸಿ. ನಿಮ್ಮ ಹಕ್ಕನ್ನು ಮೊಟಕುಗೊಳಿಸುವುದಿಲ್ಲ. ಆದರೆ, ಸರಕಾರ ಮತ್ತು ಜನರ ನಡುವೆ ಕಂದಕ ಸೃಷ್ಟಿಸುವ ಕೆಲಸವನ್ನು ಮಾಡಬಾರದು ಎಂದು ಕರೆ ನೀಡಿದರು. 
ಸಚಿವರಾದ ಡಿ.ಕೆ.ಶಿವಕುಮಾರ್‌, ಜಮೀರ್‌ ಅಹಮದ್‌ ಖಾನ್‌,  ಜಯಮಾಲಾ, ಬಿಬಿಎಂಪಿ ಮೇಯರ್‌ ಗಂಗಾಂಭಿಕೆ ಮಲ್ಲಿಕಾರ್ಜುನ ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com