ಪತ್ನಿ ಜೊತೆ ಅಕ್ರಮ ಸಂಬಂಧ; ವ್ಯಕ್ತಿ ಮೇಲೆ ಸೇಡು ತೀರಿಸಲು ಮಗು ಕೊಂದ ಪಾತಕಿ

ಎರಡೂವರೆ ವರ್ಷದ ಗಂಡು ಮಗುವನ್ನು ಅಪಹರಿಸಿ ಕೊಲೆ ಮಾಡಿದ 37 ವರ್ಷದ ಚಾಲಕನನ್ನು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಎರಡೂವರೆ ವರ್ಷದ ಗಂಡು ಮಗುವನ್ನು ಅಪಹರಿಸಿ ಕೊಲೆ ಮಾಡಿದ 37 ವರ್ಷದ ಚಾಲಕನನ್ನು ಬಂಧಿಸಲಾಗಿದ್ದು ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಮಗುವಿನ ಚಿಕ್ಕಪ್ಪನೊಂದಿಗೆ ತನ್ನ ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಗೊತ್ತಾಗಿ ಸೇಡು ತೀರಿಸಿಕೊಳ್ಳಲು ಅರ್ಮುಗಮ್ ಈ ಕೃತ್ಯವೆಸಗಿದ್ದಾನೆ.

ಮೃತ ಮಗುವನ್ನು ಅಭಿರಾಮಿಯ ಪುತ್ರ ಶ್ಯಾಮವೇಲು ಎಂದು ಗುರುತಿಸಲಾಗಿದೆ. ತಮಿಳುನಾಡು ಮೂಲದವರಾದ ಇವರು ಅಶೋಕನಗರದ ಭೀಮಣ್ಣ ಗಾರ್ಡನ್ ಬಳಿ ವಾಸಿಸುತ್ತಿದ್ದರು.

ಅರ್ಮುಗಮ್ ಕೆಲ ವರ್ಷಗಳ ಹಿಂದೆ ಚೈತ್ರಾಳನ್ನು ವಿವಾಹವಾಗಿದ್ದು ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಚೈತ್ರಾ ಶ್ಯಾಮವೇಲುವಿನ ಚಿಕ್ಕಪ್ಪ ವೃತ್ತಿಯಲ್ಲಿ ಹಣ್ಣಿನ ವ್ಯಾಪಾರಿಯಾಗಿರುವ ಮಣಿ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಎರಡೂ ಕುಟುಂಬಗಳು ಒಂದೇ ಕಂಪೌಂಡ್ ನೊಳಗಿರುವ ಮನೆಯಲ್ಲಿ ವಾಸಿಸುತ್ತಿತ್ತು. ಅರ್ಮುಗಮ್ ಗೆ ಈ ವಿಷಯ ಗೊತ್ತಾಗಿ ಮಣಿಗೆ ತನ್ನ ಪತ್ನಿಯ ವಿಷಯಕ್ಕೆ ಬರದಂತೆ ಎಚ್ಚರಿಕೆ ಕೊಟ್ಟಿದ್ದ. ಅಲ್ಲದೆ ಮಣಿಯ ಸೋದರಿ ಅಭಿರಾಮಿ ಜೊತೆ ಕೂಡ ಈ ಬಗ್ಗೆ ಮಾತನಾಡಿದ್ದ. ಈ ವಿಚಾರಕ್ಕೆ ಹೆಚ್ಚು ತಲೆಕೆಡಿಸಿಕೊಳ್ಳುವುದು ಬೇಡ, ಮಣಿಗೆ ಮದುವೆಯಾದರೆ ಎಲ್ಲವೂ ಸರಿ ಹೋಗುತ್ತದೆ ಎಂದು ಅಭಿರಾಮಿ ಹೇಳಿದ್ದಳು.

ಆದರೆ ಅರ್ಮುಗಮ್ ತೀವ್ರ ತಲೆಕೆಡಿಸಿಕೊಂಡಿದ್ದ. ಕಳೆದ ತಿಂಗಳು 30ರಂದು ಶ್ಯಾಮವೇಲು ಹೊರಗೆ ಮಕ್ಕಳೊಂದಿಗೆ ಆಟವಾಡುತ್ತಿದ್ದಾಗ ಅರ್ಮುಗಮ್ ನನ್ನು ಯಾರಿಗೂ ಕಾಣದಂತೆ ತನ್ನ ಮನೆಯೊಳಗೆ ಕರೆದುಕೊಂಡು ಹೋಗಿ ಬಾತ್ ರೂಂನ ಟಬ್ ವೊಳಗೆ ಮುಳುಗಿಸಿದ. ಮಗುವಿಗೆ ಉಸಿರುಗಟ್ಟಿದ ನಂತರ ಬ್ಯಾಗೊಳಗೆ ತುಂಬಿಸಿ ತನ್ನ ದ್ವಿಚಕ್ರ ವಾಹನದಲ್ಲಿ ತೆಗೆದುಕೊಂಡು ಹೋಗಿ ಬನ್ನೇರುಘಟ್ಟ ಸಮೀಪ ಬಿಲೆಕಹಳ್ಳಿಯಲ್ಲಿ ಚರಂಡಿಗೆಸೆದ.
ಈ ಸಮಯದಲ್ಲಿ ಅಭಿರಾಮಿ ಮತ್ತು ಆಕೆಯ ಪುತ್ರಿ ತಮಿಳುನಾಡಿಗೆ ಹೋದವರು ವಾಪಸ್ಸಾದರು. ಮಗು ಎಲ್ಲಿಯೂ ಕಾಣದಿರುವಾಗ ಹುಡುಕಲು ಆರಂಭಿಸಿದರು. ಮಣಿ ಹೋಗಿ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪೊಲೀಸರಿಗೆ ದೂರು ನೀಡಿದನು.

ಪೊಲೀಸರು ಸಿಸಿಟಿವಿಯಲ್ಲಿ ಹುಡುಕಿದಾಗ ಮಗು ಕೊನೆ ಬಾರಿಗೆ ಕಾಣಿಸಿಕೊಂಡಿದ್ದು ಅರ್ಮುಗಮ್ ಜೊತೆ. ಘಟನೆ ಬಳಿಕ ಬಾರ್ ಗೆ ಹೋಗಿ ಕುಡಿದು ಬಂದ ಅರ್ಮುಗಮ್ ಅಲ್ಲಿ ಒಬ್ಬನಲ್ಲಿ ಮಣಿ ಮೇಲಿನ ಸೇಡು ತೀರಿಸಿಕೊಳ್ಳಲು ಮಗುವನ್ನು ಕೊಂದಿದ್ದೇನೆ ಎಂದು ಹೇಳಿಕೊಂಡಿದ್ದ.


ನಿನ್ನೆ ಆ ವ್ಯಕ್ತಿ ಅಶೋಕನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದನು. ಕೂಡಲೇ ಪೊಲೀಸರು ಅರ್ಮುಗಮ್ ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾನೆ. ಮಗುವಿನ ಮೃತದೇಹ ಇನ್ನೂ ಸಿಕ್ಕಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com