ಚಿಕ್ಕಮಗಳೂರು: ಮುಳ್ಳಯ್ಯನಗಿರಿ ಮತ್ತು ಬಾಬಾ ಬುಡನ್ ಗಿರಿ ಬೆಟ್ಟ ಪ್ರದೇಶದಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ಒಂದು ಹೂವು ಅರಳುತ್ತದೆ, ಪ್ರಕೃತಿಪ್ರಿಯರನ್ನು ಕಣ್ಣರಳಿಸಿ ಬರಸೆಳೆಯುವ ಈ ಹೂವಿಗೆ ಕುರಿಂಜಿ ಅಥವಾ ನೀಲಕುರಿಂಜಿ ಹೂವು ಎಂದು ಹೆಸರು. ಈ ವರ್ಷ ಹೂವು ಅರಳದೆ ಇರುವುದು ಪ್ರವಾಸಿಗರಿಗೆ ನಿರಾಶೆಯನ್ನುಂಟುಮಾಡಿದೆ.
ಈ ಹೂವು ಕಳೆದ ಬಾರಿ ಅರಳಿದ್ದು 2006ರಲ್ಲಿ, ಈ ಹೂವು ಅರಳಿದಾಗ ಇಡೀ ಬೆಟ್ಟವೇ ನೀಲಿ ಮತ್ತು ನೇರಳೆ ಬಣ್ಣದಲ್ಲಿ ಚಿತ್ತಾರ ಬಿಡಿಸಿದಂತೆ ಕಾಣುತ್ತದೆ. 12 ವರ್ಷಗಳ ನಂತರ ಈ ಹೂ ಅರಳುತ್ತದೆ, ಇಂಟರ್ನೆಟ್, ಸೋಷಿಯಲ್ ಮೀಡಿಯಾಗಳಲ್ಲಿ ಮಾತ್ರವಲ್ಲದೆ ನೇರವಾಗಿ ಚಿಕ್ಕಮಗಳೂರಿಗೆ ಹೋಗಿ ಕಣ್ತುಂಬಿಕೊಳ್ಳಬಹುದು ಎಂದು ಪ್ರವಾಸಿಗರು ಆಸೆಯಲ್ಲಿದ್ದರು. ಆದರೆ ಅವರ ಆಸೆ ಈ ವರ್ಷ ಕೈಗೂಡುವ ಲಕ್ಷಣ ಕಾಣುತ್ತಿಲ್ಲ.
ಕೆಲವರು ಹಿಂದಿನ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿ ಅದು ಈಗಿನ ಕುರುಂಜಿ ಹೂವಿನ ಫೋಟೋ ಎಂದು ಹೇಳಿ ಹಾದಿತಪ್ಪಿಸುತ್ತಿದ್ದಾರೆ. ಇದನ್ನು ನಂಬಿಕೊಂಡು ದೂರದೂರುಗಳಿಂದ ವಾರಾಂತ್ಯಗಳಲ್ಲಿ ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ, ಬಾಬಾ ಬುಡನ್ ಗಿರಿ ಮತ್ತು ಸೀತಾಲಯನಗಿರಿಗೆ ಬಂದು ನಿರಾಶೆಯಿಂದ ವಾಪಸ್ಸಾಗುತ್ತಿದ್ದಾರೆ.
ಬೆಂಗಳೂರಿನ ಪ್ರವಾಸಿಗರೊಬ್ಬರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾಹಿತಿ ನೀಡಿ, ಸೋಷಿಯಲ್ ಮೀಡಿಯಾದಲ್ಲಿನ ಪೋಸ್ಟ್ ನೋಡಿಕೊಂಡು ಕುರುಂಜಿ ಹೂವನ್ನು ನೋಡಲೆಂದು ಬಂದೆ. ಇಲ್ಲಿನ ಬರಿದಾದ ದೃಶ್ಯ ನೋಡಿ ಬೇಸರವಾಯಿತು ಎನ್ನುತ್ತಾರೆ.
Advertisement