ಗೌರಿ ಹತ್ಯೆ ಪ್ರಕರಣ: ಪರಶುರಾಮ್ ವಾಗ್ಮೋರೆ ಆರ್'ಎಸ್ಎಸ್ ಸದಸ್ಯ- ಪ್ರಮೋದ್ ಮುತಾಲಿಕ್

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಪರಶುರಾಮ್ ವಾಗ್ಮೋರೆ ಆರ್'ಎಸ್ಎಸ್ ಸದಸ್ಯ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಶುಕ್ರವಾರ ಹೇಳಿದ್ದಾರೆ...
ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್
ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್
ಮಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಪರಶುರಾಮ್ ವಾಗ್ಮೋರೆ ಆರ್'ಎಸ್ಎಸ್ ಸದಸ್ಯ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಶುಕ್ರವಾರ ಹೇಳಿದ್ದಾರೆ. 
ಸುದ್ದಿಗಾರರೊಂದಿಗೆ ನಿನ್ನೆ ಮಾತನಾಡಿರುವ ಅವರು, ಗೌರಿ ಹತ್ಯೆ ಪ್ರಕರಣದಲ್ಲಿ ಪರಶುರಾಮ್ ವಾಗ್ಮೋರೆ ಭಾಗಿಯಾಗಿದ್ದಾನೆಂಬುದನ್ನು ನಾನು ಒಪ್ಪಲಾರೆ. ಆದರೆ, ವಾಗ್ಮೋರೆ ಆರ್'ಎಸ್ಎಸ್ ಸದಸ್ಯನಾಗಿದ್ದಾನೆಂದು ಹೇಳಿದ್ದಾರೆ. 
ಸಿಂದಗಿಯ ತಹಶೀಲ್ದಾರ್ ಕಚೇರಿ ಬಳಿ ಪಾಕಿಸ್ತಾನದ ಧ್ವಜ ಹಾರಿಸಿದ ಆರೋಪದ ಮೇರೆಗೆ ವಾಗ್ಮೋರೆಯನ್ನು 2012ರಲ್ಲಿ ಬಂಧನಕ್ಕೊಳಪಡಿಸಲಾಗಿತ್ತು. ಆ ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿರುವವರೆಲ್ಲರೂ ಆರ್'ಎಸ್ಎಸ್ ವ್ಯಕ್ತಿಗಳು ಎಂದು ತಿಳಿಸಿದ್ದಾರೆ.
ಇದೇ ವೇಳೆ ವಾಗ್ಮೋರೆ ಜೊತೆಗಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಫೋಟೋಗಳು ಮದುವೆ ಅಥವಾ ಯಾವುದೋ ಕಾರ್ಯಕ್ರಮದಲ್ಲಿ ತೆಗೆದಿರುವ ಫೋಟೋಗಳು ಎಂದು ಸ್ಪಷ್ಟಪಡಿಸಿದ್ದಾರೆ. 
ಮಾನವೀಯತೆಯ ಆಧಾರದ ಮೇರೆಗೆ ವಾಗ್ಮೋರೆ ಕುಟುಂಬಸ್ಥರನ್ನು ಸಂಘಟನೆ ಭೇಟಿ ಮಾಡಿತ್ತು. ಹಲವು ಆರೋಪಗಳ ಮೇರೆಗೆ ಇತ್ತೀಚಿನ ದಿನಗಳಲ್ಲಿ ಹಿಂದು ಕಾರ್ಯಕರ್ತರನ್ನು ಗುರಿ ಮಾಡಲಾಗುತ್ತಿದೆ. ಗೌರಿ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವವರ ಕುರಿತು ಸೂಕ್ತ ರೀತಿಯ ಸಾಕ್ಷ್ಯಾಧಾರಗಳು ಪೊಲೀಸರ ಬಳಿಯಿಲ್ಲ. ಬಂಧಿತರನ್ನು ಸುಳ್ಳು ಆರೋಪಗಳನ್ನು ಮಾಡಲಾಗಿದೆ ಎಂದಿದ್ದಾರೆ. 
ಇದೇ ವೇಳೆ ಸಂಘಟನೆಯ ಕೆಲವರು ಗೌರಿ ಹತ್ಯೆ ಬಳಿಕ ಸಂಭ್ರಮವನ್ನಾಚರಿಸಿದ್ದರ ಕುರಿತಂತೆ ಪ್ರತಿಕ್ರಿಯೆ ನೀಡಿ, ಇಂತಹ ವರ್ತನೆ ಖಂಡನೀಯ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com