ಬೆಂಗಳೂರು: ರಾಜ್ಯದಲ್ಲಿರುವ ಹಲವು ಕೈಗಾರಿಕಾ ಒಕ್ಕೂಟಗಳ ಜೊತೆ ಚರ್ಚೆ ನಡೆಸಿದ ಎಫ್ ಕೆಸಿಸಿಐ ಅಧ್ಯಕ್ಷ ಸುಧಾಕರ್ ಎಸ್ ಶೆಟ್ಟಿ, ಅಣೆಕಟ್ಟುಗಳು, ಜಲಾಶಯಗಳು ಮತ್ತು ನೈಸರ್ಗಿಕ ಮೂಲಗಳಿಂದ ಕೈಗಾರಿಕೆಗಳು ಬಳಸುತ್ತಿರುವ ನೀರಿನ ದರ ಹೆಚ್ಚಳವನ್ನು ಸರ್ಕಾರ ಪರಿಷ್ಕರಿಸಬೇಕೆಂದು ಕೋರಿದ್ದಾರೆ.
ಕಳೆದ ಮೇ 28ರಂದು ಸರ್ಕಾರ ನೀಡಿರುವ ಆದೇಶದ ಪ್ರಕಾರ, ಈ ಹಿಂದೆ ವಿಧಿಸಲಾಗುತ್ತಿದ್ದ ಪ್ರತಿ ಎಂಸಿಎಫ್ ಟಿ ಗೆ 3,200 ರೂಪಾಯಿಗಳಿಂದ 3,00,000 ರೂಪಾಯಿಗಳಿಗೆ ರಾಜ್ಯದ ಎಲ್ಲಾ ಕೈಗಾರಿಕೆಗಳಿಗೆ ಹೆಚ್ಚಳ ಮಾಡಿತ್ತು. ನೈಸರ್ಗಿಕ ಮೂಲಗಳಿಂದ ಪಡೆಯುವ ನೀರಿಗೆ ಕೈಗಾರಿಕೆಗಳಿಗೆ ಪ್ರತಿ ಎಂಸಿಎಫ್ ಟಿಗೆ 1,50,000 ರೂಪಾಯಿಗಳಿಗೆ ಹೆಚ್ಚಳ ಮಾಡಿತ್ತು. ಅದು ಹಿಂದೆ ಪ್ರತಿ ಎಂಸಿಎಫ್ ಟಿಗೆ 1,800 ರೂಪಾಯಿಗಳಾಗಿದ್ದವು.
ನೀರಿನ ದರ ಹೆಚ್ಚಳದಿಂದ ಕೈಗಾರಿಕೆಗಳಲ್ಲಿ ಉತ್ಪಾದನೆ ವೆಚ್ಚ ಹಠಾತ್ತನೆ ಏರಿಕೆಯಾಗಿದ್ದು ಸಿಮೆಂಟ್, ಸ್ಟೀಲ್ ಮತ್ತು ವಿದ್ಯುತ್ ವಲಯಗಳಲ್ಲಿ ಇದು ಇನ್ನಷ್ಟು ದುಬಾರಿಯಾಗಿದೆ. ಇದರಿಂದ ಉತ್ಪಾದನೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ ಮತ್ತು ರಾಜ್ಯದಲ್ಲಿ ನೇರ ಮತ್ತು ಪರೋಕ್ಷವಾಗಿ ಸುಮಾರು 20 ಲಕ್ಷಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಒದಗಿಸುವುದರ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಇದರಿಂದ ರಾಜ್ಯದ 52,500 ಕೈಗಾರಿಕೆಗಳಿಗೆ ತೀವ್ರ ಹೊಡೆತ ಬೀಳಲಿದೆ ಎಂದು ಎಫ್ ಕೆಸಿಸಿಐ ಅಧ್ಯಕ್ಷರು ಹೇಳಿದ್ದಾರೆ.
ಜಲ ವಿದ್ಯುತ್ ಉತ್ಪಾದನೆ ಮೇಲೆ ಪರಿಣಾಮ ಬೀರಿ ವಿದ್ಯುತ್ ಬೆಲೆ ಏರಿಕೆಯಾಗಬಹುದು ಮತ್ತು ಎಲ್ಲಾ ಉತ್ಪನ್ನಗಳ ಬೆಲೆ ಹೆಚ್ಚಳವಾಗುವ ಸಾಧ್ಯತೆಯಿದೆ. ಹಣದುಬ್ಬರ ಉಂಟಾಗಿ ಸಾಮಾನ್ಯ ಜನಜೀವನದ ಮೇಲೆ ಹೊಡೆತ ಬೀಳಲಿದೆ. ಇದರಿಂದ ಕರ್ನಾಟಕ ರಾಜ್ಯದಲ್ಲಿ ಹೂಡಿಕೆ ಮಾಡುವವರ ಸಂಖ್ಯೆ ಕಡಿಮೆಯಾಗಲಿದೆ. ಈ ನಿರ್ಧಾರವನ್ನು ಹಿಂತೆಗೆದುಕೊಳ್ಳಬೇಕೆಂದು ಎಫ್ ಕೆಸಿಸಿಐ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ.
Advertisement