ಬೆಂಗಳೂರು: ರಾಜ್ಯದಲ್ಲಿ ಕಾಣೆಯಾಗುತ್ತಿರುವ ಮಹಿಳೆಯರು ಮತ್ತು ಮಕ್ಕಳ ಬಗ್ಗೆ ಎಚ್ಚರಿಕೆಯ ಗಂಟೆ ಒತ್ತಿರುವ ಹೈಕೋರ್ಟ್ ರೈತರ ಸಾಲಮನ್ನಾಗೆ ನೀಡಿದಂತೆ ಇದಕ್ಕೆ ಕೂಡ ಸರ್ಕಾರ ಆದ್ಯತೆ ನೀಡಲು ಹೇಳಬೇಕೆಂದು ಅಡ್ವೊಕೇಟ್ ಜನರಲ್ ಅವರಿಗೆ ಸೂಚನೆ ನೀಡಿದೆ.
ಇತ್ತೀಚಿನ ದಿನಗಳಲ್ಲಿ ಕಾಣೆಯಾಗುತ್ತಿರುವ ಮಹಿಳೆಯರು ಮತ್ತು ಮಕ್ಕಳ ಸಂಖ್ಯೆ ಅಧಿಕವಾಗಿದ್ದು, ಇದು ಕೂಡ ಆದ್ಯತೆಯ ವಿಷಯವಾಗಿದೆ ಎಂದು ಸರ್ಕಾರಕ್ಕೆ ತಿಳಿಸಬೇಕು ಎಂದು ನ್ಯಾಯಮೂರ್ತಿಗಳಾದ ರಾಘವೇಂದ್ರ ಎಸ್ ಚೌಹಾಣ್ ಮತ್ತು ಶ್ಯಾಮ್ ಪ್ರಸಾದ್ ಅವರನ್ನೊಳಗೊಂಡ ವಿಭಾಗೀಯ ಪೀಠ ಅಡ್ವೊಕೇಟ್ ಜನರಲ್ ಉದಯ್ ಹೊಳ್ಳ ಅವರಿಗೆ ಮೌಖಿಕವಾಗಿ ಹೇಳಿದೆ.ಹೇಬಿಯಸ್ ಕಾರ್ಪಸ್ ಅರ್ಜಿಯಡಿ ಸಲ್ಲಿಸಲಾದ ದೂರಿಗೆ ಸಂಬಂಧಪಟ್ಟಂತೆ ವಿಚಾರಣೆ ನಡೆಸುವಾಗ ನ್ಯಾಯಮೂರ್ತಿಗಳು ಹೀಗೆ ಹೇಳಿದ್ದಾರೆ.
ಗೃಹ ಇಲಾಖೆಯಗಳು ಮತ್ತು ಸಾಮಾಜಿಕ ಕಲ್ಯಾಣಯಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿಗಳು ಸೆಪ್ಟೆಂಬರ್ 24ರೊಳಗೆ ನಿರ್ಗತಿಕ ಮಹಿಳೆಯರು ಮತ್ತು ಮಕ್ಕಳ ಪುನರ್ವಸತಿಗೆ ತೆಗೆದುಕೊಂಡಿರುವ ಕ್ರಮಗಳ ಕುರಿತು ಸೆಪ್ಟೆಂಬರ್ 24ರೊಳಗೆ ಅಫಿಡವಿಟ್ಟು ಸಲ್ಲಿಸುವಂತೆ ನ್ಯಾಯಾಲಯ ಆದೇಶ ನೀಡಿದೆ. ಇಂತಹ ಮಹಿಳೆಯರು ಮಾನವ ಕಳ್ಳಸಾಗಣೆ ಮತ್ತು ಜೀತ ಕಾರ್ಮಿಕತೆಗೆ ಒಳಗಾಗುವ ಸಾಧ್ಯತೆಯಿದೆ ಎಂದು ನ್ಯಾಯಾಲಯ ಎಚ್ಚರಿಕೆ ನೀಡಿದೆ.
ಈ ಮಧ್ಯೆ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್ ರಾಜು ಅವರು ರಾಜ್ಯದಲ್ಲಿ ಕಾಣೆಯಾಗಿರುವ ಮಹಿಳೆಯರು ಮತ್ತು ಮಕ್ಕಳ ಬಗ್ಗೆ ನ್ಯಾಯಾಲಯಕ್ಕೆ ಅಫಿಡವಿಟ್ಟು ಸಲ್ಲಿಸಿದರು.
2015ರಿಂದ 2018ರವರೆಗೆ ರಾಜ್ಯದಲ್ಲಿ 51,429 ಮಂದಿ ಕಾಣೆಯಾಗಿದ್ದು ಪೊಲೀಸ್ ಇಲಾಖೆ 37,496 ಮಂದಿಯನ್ನು ಪತ್ತೆಹಚ್ಚಿದೆ.
Advertisement