ನಾಳೆ 'ಭಾರತ್ ಬಂದ್ ': ಸಾಮಾನ್ಯ ಜನಜೀವನ ಏರುಪೇರು ಸಾಧ್ಯತೆ

ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ನಾಳೆ ಕರೆ ನೀಡಿರುವ ಭಾರತ್ ಬಂದ್ ಗೆ ಜೆಡಿಎಸ್ ಕೂಡಾ ಬೆಂಬಲ ವ್ಯಕ್ತಪಡಿಸಿದ್ದು, ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ನಗರಗಳಲ್ಲಿ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಳ್ಳುವ ಸಾಧ್ಯತೆ ಇದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು : ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್  ನಾಳೆ ಕರೆ  ನೀಡಿರುವ ಭಾರತ್ ಬಂದ್ ಗೆ  ಜೆಡಿಎಸ್ ಕೂಡಾ ಬೆಂಬಲ ವ್ಯಕ್ತಪಡಿಸಿದ್ದು, ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ನಗರಗಳಲ್ಲಿ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಳ್ಳುವ ಸಾಧ್ಯತೆ ಇದೆ.

ಬೆಳಗ್ಗೆ  6 ರಿಂದ ಸಂಜೆ ಆರು ಗಂಟೆಯವರೆಗೂ ಬಂದ್ ಗೆ ಕರೆ ನೀಡಲಾಗಿದ್ದು,  ಕೆಎಸ್ ಆರ್ ಟಿಸಿ  ಸಿಬ್ಬಂದಿ ಮತ್ತು ಕಾರ್ಮಿಕರ ಒಕ್ಕೂಟ  ಬೆಂಬಲ ವ್ಯಕ್ತಪಡಿಸಿರುವುದರಿಂದ  ರಾಜ್ಯಾದಾದ್ಯಂತ ಬಸ್ಸುಗಳ ರಸ್ತೆಗೆ  ಇಳಿಯುವುದಿಲ್ಲ. ಹಿಂಸಾಚಾರದಂತಹ ಘಟನೆ ಹಿನ್ನೆಲೆಯಲ್ಲಿ ಬಸ್  ಸೇವೆಯನ್ನು ಸ್ಥಗಿತಗೊಳಿಸುವುದು ಎಂದು ಬಿಎಂಟಿಸಿ ಹಾಗೂ ಕೆಎಸ್ ಆರ್ ಟಿಸಿ ಅಧಿಕೃತವಾಗಿ ಹೇಳಿಕೆ ನೀಡಿವೆ.

ನಮ್ಮ  ಮೆಟ್ರೋ ರೈಲು ಸಂಚಾರ ಎಂದಿನಂತೆ ಸಾಗಲಿದೆ. ಆದರೆ, ಒಂದು ವೇಳೆ ಪೊಲೀಸರು ಸಲಹೆ ಮಾಡಿದ್ದರೆ  ಬಂದ್ ಮಾಡಲಾಗುವುದು. ಈ ಸಂಬಂಧ ನಾಳೆ ಬೆಳಿಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆದಾಗ್ಯೂ, ಕೆಲ ಆಟೋ ರಿಕ್ಷಾ ಒಕ್ಕೂಟಗಳು ಕಾರ್ಯಾಚರಣೆ ನಡೆಸುವುದಾಗಿ ತಿಳಿಸಿವೆ. ಸಿಲಿಂಡರ್ ಬೆಲೆಯಲ್ಲಿ ಪರಿಣಾಮ ಬೀರಿಲ್ಲ. ಆದ್ದರಿಂದ ಬಂದ್ ಗೆ ಬೆಂಬಲ ನೀಡುವುದಿಲ್ಲ , ಎಂದಿನಂತೆ ಆಟೋಗಳು ಕಾರ್ಯಾಚರಣೆ ನಡೆಸಲಿವೆ ಎಂದು ಆದರ್ಶ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘದ  ಅಧ್ಯಕ್ಷ ಎಂ. ಮಂಜುನಾಥ್ ಹೇಳಿದ್ದಾರೆ.

ರಾಜ್ಯ ಲಾರಿ ಮಾಲೀಕರ ಸಂಘ ಕೂಡಾ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದೆ. ಡೀಸೆಲ್ ಬೆಲೆ ಯಲ್ಲಿ ಏರಿಕೆ ವಿರೋಧಿಸಿ ಬಂದ್ ನಡೆಯುತ್ತಿರುವುದರಿಂದ ಬಂದ್ ಬೆಂಬಲಿಸುವುದಾಗಿ ರಾಜ್ಯ  ಲಾರಿ ಮಾಲೀಕರ ಸಂಘದ ಅಧ್ಯಕ್ಷ ಚನ್ನಾರೆಡ್ಡಿ ಹೇಳಿದ್ದಾರೆ.

ಕೆಲ ಖಾಸಗಿ ಶಾಲೆಗಳಿಗೆ ಈಗಾಗಲೇ ರಜೆ ಘೋಷಿಸಲಾಗಿದೆ. ಸರ್ಕಾರ ಶಾಲೆಗಳಿಗೆ ನಾಳೆ ಜಿಲ್ಲಾಧಿಕಾರಿಗಳು ರಜೆ ಘೋಷಿಸುವ ಸಾಧ್ಯತೆ ಇದೆ . ಭಾರತ್ ಬಂದ್  ಕರೆಗೆ ಟ್ಯಾಕ್ಸಿ   ಮಾಲೀಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.  ಬಂದ್ ನಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಬೆಂಗಳೂರು ಟೂರಿಸ್ಟ್ ಟ್ಯಾಕ್ಸಿ ಮಾಲೀಕರ ಸಂಘದ  ಅಧ್ಯಕ್ಷ ಕೆ. ರಾಧಾಕೃಷ್ಣ ಹೊಳ್ಳ  ತಿಳಿಸಿದ್ದಾರೆ.

ಆದಾಗ್ಯೂ, ಓಲಾ ಮತ್ತು ಉಬರ್ ಚಾಲಕರು ಮತ್ತು ಮಾಲೀಕರ ಸಂಘ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದ್ದು, ನಾಳೆ ಕೆಲಸಕ್ಕೆ ಬರದಂತೆ ಚಾಲಕರಿಗೆ ತಿಳಿಸಿದೆ. ಬೆಳಗ್ಗೆ 6 ರಿಂದ ಸಂಜೆ 6 ರವರೆಗೂ ಟ್ಸಾಕ್ಸಿ ಸೇವೆ ಸ್ಥಗಿತಗೊಳಿಸಿ ಟೌನ್ ಹಾಲ್ ಮುಂಭಾಗ ಪ್ರತಿಭಟನೆ ಮಾಡುವುದಾಗಿ ಯೂನಿಯನ್ ಅಧ್ಯಕ್ಷ ತನ್ವೀರ್ ಪಾಶ ತಿಳಿಸಿದ್ದಾರೆ. ಕನ್ನಡ ರಕ್ಷಣಾ ವೇದಿಕೆ  ಪ್ರವೀಣ್ ಶೆಟ್ಟಿ ಬಣ  ರಾಜಭವನ ಮುತ್ತಿಗೆ ಹಾಕಲು ಯೋಜನೆ ಹಾಕಿಕೊಂಡಿದೆ.
ಅಗತ್ಯ ಸೇವೆಗಳಾದ ಔಷಧಿ ಮಳಿಗೆ, ಆಸ್ಪತ್ರೆ, ತರಕಾರಿ, ಹಾಲು ಸರಬರಾಜು, ತುರ್ತು ಸೇವೆಗಳನ್ನು ಹೊರತುಪಡಿಸಿ ಸರ್ಕಾರಿ ಕಚೇರಿಗಳು, ಬ್ಯಾಂಕುಗಳು ಮುಚ್ಚುವ ಸಾಧ್ಯತೆಗಳಿವೆ.
ಬಂದ್ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತೆ ವಹಿಸಲು ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com