ಬೆಂಗಳೂರು: ಹಿಟ್ ಅಂಡ್ ರನ್ ಪ್ರಕರಣ; ಬೈಕ್ ಗೆ ಅಪರಿಚಿತ ವಾಹನ ಡಿಕ್ಕಿ; ತಾಯಿ-ಮಗಳ ದಾರುಣ ಸಾವು

ಅಪರಿಚಿತ ವಾಹನ ಹರಿದು ತಾಯಿ-ಮಗಳು ಮೃತಪಟ್ಟಿರುವ ದಾರುಣ ಘಟನೆ ನಾಗವಾರ ರಿಂಗ್‌ ರಸ್ತೆಯಲ್ಲಿ ನಡೆದಿದೆ. .
ಅಪಘಾತದಲ್ಲಿ ಮೃತಪಟ್ಟ ಸುರೇಖಾ ಮತ್ತು ಆರಾಧ್ಯ
ಅಪಘಾತದಲ್ಲಿ ಮೃತಪಟ್ಟ ಸುರೇಖಾ ಮತ್ತು ಆರಾಧ್ಯ
Updated on
ಬೆಂಗಳೂರು: ಅಪರಿಚಿತ ವಾಹನ ಹರಿದು ತಾಯಿ-ಮಗಳು ಮೃತಪಟ್ಟಿರುವ ದಾರುಣ ಘಟನೆ ನಾಗವಾರ ರಿಂಗ್‌ ರಸ್ತೆಯಲ್ಲಿ ನಡೆದಿದೆ. 
ಹೆಗ್ಗಡೆನಗರ ನಿವಾಸಿ ರಘು ಎಂಬುವವರ ಪತ್ನಿ ಸುರೇಖಾ (30) ಹಾಗೂ ಪುತ್ರಿ ಆರಾಧ್ಯ (3) ಮೃತರು. ಘಟನೆಯಲ್ಲಿ ರಘು ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. 
ಉಡುಪಿ ಜಿಲ್ಲೆ ಕುಂದಾಪುರ ಮೂಲದ ರಘು ದಂಪತಿ, ಗಂಗಾನಗರದ ಸಿಬಿಐ ಬಳಿ ಬೇಕರಿ ನಡೆಸುತ್ತಿದ್ದರು. ಇತ್ತೀಚೆಗಷ್ಟೇ ಬೆಂಗಳೂರಿಗೆ ಬಂದಿದ್ದ ಅವರು, ಬೇಕರಿ ಸಮೀಪದಲ್ಲೇ ಮನೆ ಮಾಡಿಕೊಂಡಿದ್ದರು. 
ಗುರುವಾರ ಸಂಜೆ ಬಳ್ಳಾರಿ ರಸ್ತೆ ಬ್ಯಾಟರಾಯನಪುರದಲ್ಲಿರುವ ಸ್ನೇಹಿತರ ಮನೆಗೆ ಹೋಗಿದ್ದರು. ರಾತ್ರಿ 10.30ರ ಸುಮಾರಿಗೆ ವಾಪಸ್‌ ತಮ್ಮ ಸ್ಕೂಟರ್‌ನಲ್ಲಿ ಮನೆಗೆ ಮರಳುತ್ತಿದ್ದರು. ಹೆಬ್ಬಾಳ ಫ್ಲೈಓವರ್‌ ಬಳಿ ಗೊತ್ತಿಲ್ಲದೇ ಎಡಕ್ಕೆ ತಿರುಗಿಸಿಕೊಂಡು ಕೆ.ಆರ್‌. ಪುರದ ಕಡೆ ತೆರಳಿದ್ದರು. ಸ್ವಲ್ಪ ದೂರ ಮುಂದೆ ಹೋದ ಬಳಿಕ ದಾರಿ ತಪ್ಪಿರುವುದು ಗೊತ್ತಾಗಿ, ಸ್ಥಳೀಯರ ಬಳಿ ವಿಳಾಸ ಕೇಳಿದ್ದಾರೆ. ಅವರು ಯು ತಿರುವು ತೆಗೆದುಕೊಂಡು ವಾಪಸ್‌ ಹೆಬ್ಬಾಳ ಕಡೆ ತೆರಳುವಂತೆ ತಿಳಿಸಿದ್ದ ಕಾರಣ ನಾಗವಾರ ಬಳಿ ತಿರುವು ತೆಗೆದುಕೊಂಡು ಹೋಗುತ್ತಿದ್ದರು. ಲುಂಬಿನಿ ಗಾರ್ಡನ್‌ ಬಳಿ ತೆರಳುತ್ತಿದ್ದಾಗ ಅಪರಿಚಿತ ವಾಹನವೊಂದು ರಘು ಸ್ಕೂಟರ್‌ಗೆ ತಾಗಿ ವೇಗವಾಗಿ ಮುಂದಕ್ಕೆ ಸಾಗಿದೆ. ಪರಿಣಾಮ ನಿಯಂತ್ರಣ ತಪ್ಪಿದ ಸ್ಕೂಟರ್‌ ಸಮೇತ ಮೂವರು ರಸ್ತೆಗೆ ಬಿದ್ದಿದ್ದಾರೆ. 
ಡಿಕ್ಕಿ ಹೊಡೆದಿರುವ ಅಪರಿಚಿತ ವಾಹನದ ಪತ್ತೆಗೆ ರಸ್ತೆಯಲ್ಲಿರುವ ಸಿಗ್ನಲ್‌ಗಳ ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸಲಾಗುತ್ತಿದೆ. ಆದರೆ ಅಲ್ಲಿ ಯಾವುದೇ ಸಿಸಿಟಿವಿ ಕ್ಯಾಮೆರಾ ಇಲ್ಲ ಎಂದು ಹೇಳಲಾಗಿದೆ. ರಸ್ತೆಯಲ್ಲಿ ಹೋಗುತ್ತಿದ್ದ ವಾಹನ ಸವಾರನೊಬ್ಬ ತಮ್ಮ ಗಾಡಿ ನಿಲ್ಲಿಸಿರಘು ಪೂಜಾರ್ ಅವರಿಗೆ ಸಹಾಯ ಮಾಡಿದ್ದಾರೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com